ಮಂಗಳೂರು, ಸೆ.18 (DaijiworldNews/PY): "ಬಿಜೆಪಿ ಹಿಂದೂಗಳ ಬೆನ್ನಿಗೆ ಚೂರಿ ಹಾಕಿದೆ. ಸಿಎಂ ಬದಲಾವಣೆ ಸಂದರ್ಭ ಬೊಬ್ಬೆ ಹಾಕಿದ ಕಾವಿಧಾರಿಗಳು ಮೌನಕ್ಕೆ ಶರಣಾಗಿರುವುದು ಖಂಡನೀಯ" ಎಂದು ಹಿಂದೂ ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಂಘ -ಪರಿವಾರ ನಡೆಸುತ್ತಿರುವ ಹೋರಾಟವನ್ನು ನೋಡಿದರೆ ಅಸಹ್ಯವಾಗುತ್ತದೆ. ಬಿಜೆಪಿ ಜನರಿಗೆ ಮಾಡಿದ ಮರೆಮಾಚಲು ಈ ನಾಟಕದ ಮೂಕಲ ಜನರ ದಾರಿಯನ್ನು ತಪ್ಪಿಸುವ ಹುನ್ನಾರವಾಗಿದೆ. ನಿಮ್ಮ ಸಂಘ-ಪರಿವಾರದ ಹೋರಾಟವು ನಿಜವಾಗಿಯೂ ಪ್ರಾಮಾಣಿಕ ಹಾಗೂ ನ್ಯಾಯ ಸಮ್ಮತವಾಗಿದ್ದರೆ ಬಹಿರಂಗವಾಗಿ ಹಿಂದೂ ಸಮಾಜಕ್ಕೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಹಿಂದುತ್ವದ ಪಕ್ಷವಾದ ಹಿಂದೂ ಮಹಾಸಭಾವನ್ನು ಬೆಂಬಲಿಸಿ" ಎಂದು ಕರೆ ನೀಡಿದ್ದಾರೆ.
"ಮೈಸೂರಿನ 800 ವರ್ಷಗಳ ಇತಿಹಾಸ ಪ್ರಸಿದ್ಧ ದೇವಾಲಯ ಧ್ವಂಸ ವಿಚಾರದ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಎಂದು ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ. ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಗುರಿ ಮಾಡುತ್ತಿದ್ದಾರೆ. ಇಲ್ಲಿ ಒಂದೇ ಒಂದು ಮಸೀದಿ, ಚರ್ಚ್ ಅನ್ನು ಧ್ವಂಸ ಮಾಡಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.
"ಇನ್ನೂ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡುತ್ತವೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇವರೇ ಪ್ರತಿಭಟನೆ ಮಾಡುತ್ತಾರೆ. ಸಹಪರಿವಾರಗಳು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಾರೆ. ಇವರಿಗೆ ಅಷ್ಟು ಅಭಿಮಾನ ಇದ್ದರೆ ಸರ್ಕಾರವನ್ನು ಬಹಿಷ್ಕರಿಸಲಿ. ಮತ್ತೆ ಬಿಜೆಪಿಗೆ ಸಹಪರಿವಾರಗಳು ಬೆಂಬಲ ನೀಡುವುದಿಲ್ಲ, ನೀಡಬಾರದು ಎಂದು ಘೋಷಿಸಲಿ" ಎಂದಿದ್ದಾರೆ.
"ದೇವಾಲಯ ಧ್ವಂಸ ಪಕ್ಷದಿಂದಾದ ಸಣ್ಣ ತಪ್ಪು ಎಂದು ಹೇಳುತ್ತಾರೆ. ಹಾಗಾದರೆ, ಇವರ ಪ್ರಕಾರ ದೇವಾಲಯ ಧ್ವಂಸ ಸಣ್ಣ ವಿಚಾರವೇ?. ದೇವಾಲಯ ಧ್ವಂಸ ಸಣ್ಣ ತಪ್ಪಾದರೆ ದೊಡ್ಡ ತಪ್ಪು ಯಾವುದು? ದೇವಾಲಯವನ್ನು ಮತ್ತೆ ನಿರ್ಮಾಣ ಮಾಡುತ್ತಾರೆ ಎಂದು ಹೇಳುತ್ತಾರೆ. ಯಾರ ಹಣದಲ್ಲಿ ದೇವಾಲಯ ಮರುನಿರ್ಮಾಣ ಮಾಡುತ್ತೀರಾ?. ಸರ್ಕಾರದ ಹಣದಲ್ಲಿ ಜನರ ತೆರಿಗೆಯಲ್ಲಿ ಮರುನಿರ್ಮಾಣ ಮಾಡುತ್ತೀರಾ?" ಎಂದು ಕೇಳಿದ್ದಾರೆ.
"ಇಲ್ಲಿ ಸಂಸದರು ಶಾಸಕರು ಬಾಲಿಷ ಉತ್ತರ ನೀಡುತ್ತಾರೆ. ಇಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮತ ಓಲೈಕೆಗೆ ಮುಂದಾಗಿದೆ. ದೇವಾಲಯ ಧ್ವಂಸದ ಮೂಲಕ ಅಲ್ಪಸಂಖ್ಯಾ ಮತ ಗಳಿಕೆಗೆ ಮುಂದಾಗಿದೆ. ಇವರ ವಿರುದ್ದ ಹಿಂದೂ ಮಹಾ ಸಭಾ ಮುಂದಿನ ಚುನಾವಣೆವರೆಗೆ ಹೋರಾಟ ಮಾಡುತ್ತೆ" ಎಂದು ಹೇಳಿದ್ದಾರೆ.
"ನಾವು ಗಾಂಧಿಯನ್ನೇ ಬಿಟ್ಟಿಲ್ಲ ಗಾಂಧಿಯನ್ನೇ ಹತ್ಯೆ ಮಾಡಿದ್ದೇವೆ. ಹಿಂದೂಗಳ ಮೇಲೆ ದಾಳಿ ಆದಾಗ ಗಾಂಧಿಯನ್ನೇ ಬಿಟ್ಟಿಲ್ಲ. ಇನ್ನು ನಿಮ್ಮನ್ನು ಬಿಡುತ್ತೇವಾ?. ಬಿಜೆಪಿ ಒಂದು ಬೆನ್ನುಮೂಳೆ ಇಲ್ಲದ ಸರ್ಕಾರ. ಇವರಿಗಿಂತ ತಾಲಿಬಾನ್ಗಳು ವಾಸಿ. ಇವರ ಸರ್ಕಾರ ತಾಲಿಬಾನ್ಗಳಿಗಿಂತ ಕೀಳು" ಎಂದು ಟೀಕಿಸಿದ್ದಾರೆ.
"ನಮ್ಮ ದೇಶವು ಹಿಂದೂ ದೇಶವೇ ಹೊರತು ಜಾತ್ಯಾತೀತ ದೇಶವಲ್ಲ. ಸಂವಿಧಾನ ಜಾತ್ಯಾತೀತವಾದರೂ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಜಾತ್ಯಾತೀತವಲ್ಲ. ಸಂವಿಧಾನವನ್ನು ಭ್ರಷ್ಟ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಜಾತ್ಯಾತೀತವಾಗಿ ಬದಲಾಯಿಸಿಕೊಂಡಿದ್ದು, ಅದನ್ನು ಹಿಂದೂ ಮಹಾಸಭಾ ಖಂಡಿತವಾಗಿಯೂ ಒಪ್ಪಿಕೊಳ್ಳುವುದಿಲ್ಲ" ಎಂದಿದ್ದಾರೆ.