ಕಾರ್ಕಳ, ಸೆ 18 (DaijiworldNews/MS): ವಿಶ್ವವೇ ಕರೋನಾ ಸಂಕಷ್ಟವನ್ನು ಎದುರಿಸುತ್ತಿರುವ ದಿನಗಳಲ್ಲಿ ಭಾರತ ದೇಶವು ಕೃಷಿ ಕ್ಷೇತ್ರದಲ್ಲಿ 305 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಿದೆ. 145 ಕೋಟಿ ಜನ ಉಪಯೋಗಿಸಿ ಮಿಕ್ಕಿ ಉಳಿಯುವಷ್ಟು ಉತ್ಪಾದನೆ ಮಾಡಿದೆ. 356 ಮಿಲಿಯನ್ ಮೆಟ್ರಕ್ ಟನ್ ಹಣ್ಣು,ತರಕಾರಿ ಉತ್ಪಾದಿಸಿರುವುದು ದಾಖಲೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಬಾಹುಬಲಿ ಪ್ರವಚನ ಮಂದಿರದಲ್ಲಿ ಕಾರ್ಕಳ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಸಭೆ ಹಾಗೂ ರೈತ ಸಂವಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಶೇ. 80 ಅತೀ ಸಣ್ಣ ಮತ್ತು ಸಣ್ಣ ರೈತರಿದ್ದು ಕೃಷಿಲಾಭದಾಯಕವಲ್ಲವೆಂದು ಹಡೀಲು ಬಿಡುತ್ತಿದ್ದಾರೆ. ಸಣ್ಣ ಕೃಷಿಕರನ್ನು ಸಂಘಟಿಸಿ ಅವರಿಗೆ ವೈಜ್ಞಾನಿಕ ತಂತ್ರಜ್ಞಾನ ಯಂತ್ರೋಪಕರಣಗಳ ಬಳಕೆಯನ್ನು ಉತ್ತೇಜಿಸಬೇಕಾಗಿದೆ. ಆಹಾರ ಉತ್ಪಾದನೆ ಮಾತ್ರವಲ್ಲ ಅದನ್ನು ಲಾಭದಾಯಕವಾಗಿರಲು ಆಹಾರ ಸಂಸ್ಕರಣೆ ಮೌಲ್ಯವರ್ಧನೆಯತ್ತಲೂ ಗಮನ ಹರಿಸಬೇಕೆಂದರು.
ಸಹಕಾರಿ ಸಂಘಗಳು ರೈತರ ಉತ್ಪಾದಕ ಸಂಸ್ಥೆಗಳು ಮೌಲ್ಯವರ್ಧನೆ ಘಟಕಗಳನ್ನು ಆರಂಭಿಸಲು ಸಾಲ ಹಾಗೂ ಸಹಾಯಧನದ ನೆರವು ಒದಗಿಸಲಾಗುವುದು. ತೆಂಗಿನ ಉತ್ಪನ್ನಗಳ ರಫ್ತಿಗೆ ಇದ್ದ ನಿಷೇಧ ತೆರವು ಮಾಡಲಾಗಿದೆ. ತೆಂಗಿನ ಹಾಲು ತಾಯಿಯ ಎದೆಹಾಲಿಗಿಂತಲೂ ಉತ್ಕೃಷ್ಟವಾದುದು. ತೆಂಗಿನ ಕಾಯಿ ಪುಡಿ ಮತ್ತು ತೆಂಗಿನ ಹಾಲಿಗೆ ವಿದೇಶದಲ್ಲಿ ಭಾರೀ ಬೇಡಿಕೆಯಿದೆ ಎಂದು ತಿಳಿಸಿದರು.
ಸಾವಯವ ಪದಾರ್ಥಗಳಿಗೆ ಬೇಡಿಕೆ
ಸಾವಯವ ಆಹಾರೋತ್ಪನ್ನಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆಯಿದೆ. ಈಶಾನ್ಯ ಭಾರತದ ಏಳು ರಾಜ್ಯಗಳಲ್ಲಿ ಸಾವಯವ ಕೃಷಿಯೇ ಪ್ರಧಾನವಾಗಿದ್ದು, ದೊಡ್ಡ ದೊಡ್ಡ ವಿದೇಶಿ ಕಂಪೆನಿಗಳು ನೇರವಾಗಿ ರೈತರಿಂದ ಆಹಾರೋತ್ಪನ್ನಗಳನ್ನು ಖರೀದಿಸುತ್ತಿವೆ.
ಕಾಫಿ,ಕಾಳುಮೆಣಸು,ಮಾವಿನಹಣ್ಣುಇತ್ಯಾದಿ ಸೇರಿದಂತೆ ತಾಜಾ ತರಕಾರಿ ಹಣ್ಣು ವಿದೇಶಗಳಿಗೆ ರಫ್ತಾಗುತ್ತದೆ. ಕರ್ನಾಟಕ ರಪ್ತುನಲ್ಲಿ ಹಿಂದಿದೆ. ಸಾಕಷ್ಟು ವಿಫುಲ ಅವಕಾಶಗಳಿದ್ದು, ಅದನ್ನು ಸದ್ದುಪಯೋಗ ಪಡಿಸಬೇಕೆಂದು ರೈತರಿಗೆ ಸಲಹೆ ನೀಡಿದರು.
ತಾಂಬುಲ ಸೇವನೆಗೈದವರ ಆರೋಗ್ಯ ಸದೃಢ
ತಾಂಬಿಲ ಸೇವನೆಗೈದವರ ಆರೋಗ್ಯ ಸದೃಢವಾಗಿದೆ. ಇದಕ್ಕೆ ಇಂಬು ನೀಡಿರುವಂತೆ ನಮ್ಮ ಹಿರಿಯರು ತಾಂಬುಲ ಸೇವನೆಗೈಯುತ್ತಿದ್ದರು. ತಾಂಬುಲದಲ್ಲಿ ಒಳಗೊಂಡಿರುವ ಅಡಿಕೆಯಲ್ಲಿ ಯಾವುದೇ ತರದ ವಿಷಕಾರಿ ಅಂಶಗಳಿಲ್ಲ. ಗುಟ್ಕಾ ತಯಾರಿಕೆಯಲ್ಲಿ ಬಳಸಲಾಗುವ ಅಡಿಕೆಗೆ ರಾಸಾಯನಿಕ ಮಿಶ್ರಣ ಮಾಡುವುದರಿಂದ ಅವುಗಳಲ್ಲಿ ವಿಷಕಾರಿ ಅಂಶ ಇರುತ್ತದೆ ಹೊರತು ಅಡಿಕೆಯಲ್ಲಿ ಅಲ್ಲವೆಂದು ಹೇಳಿರುವ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಯುಪಿಎ ಸರಕಾರದ ಅವಧಿಯಲ್ಲಿ ಅಡಿಕೆಯಲ್ಲಿ ವಿಷಕಾರಿ ಅಂಶ ಇದೆ ಎಂಬ ಗುಲ್ಲು ಎಬ್ಬಿಸಲಾಗಿತ್ತು. ಪರಿಣಾಮ ಅಡಿಕೆ ಕೃಷಿಯ ಮೇಲೆ ಕರಿಛಾಯೆ ಮೂಡಿತು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಸಲಹೆ ನೀಡಿದ್ದು, ಕಾನೂನು ಹಾಗೂ ಸಮಗ್ರವಾದ ವೈಜ್ಞಾನಿಕ ವರದಿಯನ್ನು ಮುಂದಿಟ್ಟು ಅಡಿಕೆಯ ಮೇಲೆ ಇದ್ದ ಅಪವಾಧವನ್ನು ಹೋಗಲಾಡಿಸಿ ರೈತರ ಹಿತ ಕಾಪಾಡುವಂತೆ ಸಲಹೆ ನೀಡಿರುವುದಾಗಿ ಸಭೆಗೆ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಂರ್ದಭೋಚಿತವಾಗಿ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿಯ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, ಎಂ.ಕೆ.ವಿಜಯಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟ, ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಗೇರುಬೀಜ ನಿಗಮ ಮಂಡಳಿತ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಮಂಡಲದ ಉಸ್ತುವಾರಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್, ರೇಷ್ಮಾ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಸವಿತಾ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ ಸಲ್ಯಾನ್, ವಕ್ತಾರ ಮುಟ್ಲುಪ್ಪಾಡಿ ಸತೀಶ್ ಶೆಟ್ಟಿ , ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಪ್ರವೀಣ್ ಗುರ್ಮೆ, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಉಪ್ಪೂರು, ಮೊದಲಾದವರು ಉಪಸ್ಥಿತರಿದ್ದರು.
ನವೀನ್ ನಾಯಕ್ ನಿರೂಪಿಸಿದರು. ಸುಹಾಸ್ ಶೆಟ್ಟಿ ಧನ್ಯವಾದವಿತ್ತರು.