ಕೋಟ, ಸ.17 (DaijiworldNews/HR): "ಕೋವಿಡ್ ವಾಕ್ಸಿನ್ಗೆ ಅಮೇರಿಕಾ, ಯುರೋಪಿಯನ್ ದೇಶಗಳನ್ನು ನೋಡದೆ ಭಾರತದಲ್ಲಿಯೇ ಸ್ವದೇಶಿ ನಿರ್ಮಿತ ಲಸಿಕೆಯನ್ನು ಕಂಡು ಹಿಡಿದು ಸುಮಾರು 70 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ನವಂಬರ್ ಅಂತ್ಯದೊಳಗೆ ದೇಶದಲ್ಲಿ ಎಲ್ಲರಿಗೂ ವಾಕ್ಸಿನ್ ನೀಡುವ ಗುರಿ ಇದೆ. ಹೀಗೆ ನರೇಂದ್ರ ಮೋದಿಯವರು ತನಗಾಗಿ ಏನು ಮಾಡದೇ ಬಡ ಜನರ ಅಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಸೇವಾ ಕಾರ್ಯಗಳನ್ನು ಇಷ್ಟ ಪಡುವ ಪ್ರಧಾನಿಯವ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನಾರ್ಹ ಕಾರ್ಯವಾಗಿದೆ" ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ, ಹಾಗೂ ಕುಂದಾಪುರ ಮಹಿಳಾ ಮೋರ್ಚಾ ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಮತ್ತು ಐಸ್ಸಿಲರ್ ವಿಷನ್ ಫೌಂಡೇಶನ್ ಇವರ ಸಹಯೋಗದಲ್ಲಿ ಕೋಟದ ಮಾಂಗಲ್ಯ ಸಭಾ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ದೇಶದ ಜನತೆಗಿಂದು ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಕಾರ್ಯ ನಡೆದಿದೆ. ಬಡ ಜನರಿಗೆ, ರೈತರಿಗೆ ಏನು ಅವಶ್ಯಕತೆ ಇದೆ ಎನ್ನುವುದನ್ನು ಆದ್ಯತೆಯ ಮೇರೆಗೆ ಒದಗಿಸಿಕೊಡಲಾಗುತ್ತಿದೆ. ಪಡಿತರ, ಅಡುಗೆ ಅನಿಲ, ಔಷಧ, ವಿದ್ಯುತ್ ಹೀಗೆ ವಿವಿಧ ಯೋಜನೆಯಡಿ ನೀಡಲಾಗುತ್ತಿದೆ. ಸೌಲಭ್ಯಗಳು ಇವತ್ತು ಆರ್ಹ ಫಲಾನುಭವಿಗಳಿಗೆ ಸುಲಭವಾಗಿ ತಲುಪುತ್ತಿದೆ. ಸೇವಾಕಾರ್ಯವನ್ನೇ ಇಷ್ಟಪಡುವ ಮಹಾನ್ ಪುರುಷರ ಜನ್ಮದಿನಾಚರಣೆಯಂದು ಇಂಥಹ ಕಾರ್ಯಕ್ರಮ ಆಯೋಜಿಸುವುದು ಅರ್ಥಪೂರ್ಣವಾಗಿದೆ" ಎಂದರು.
"ಮಹಿಳೆಯರು ಇವತ್ತು ತಮಗೆ ಆರೋಗ್ಯ ಸಮಸ್ಯೆ ಕಾಡಿದಾಗ ಪ್ರಾರಂಭದಲ್ಲಿ ಹೇಳುವುದಿಲ್ಲ. ಮನೆಯ ಎಲ್ಲರ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ಗಮನ ಹರಿಸದಿರುವುದು ಕೆಲವು ಸಂದರ್ಭದಲ್ಲಿ ಕಂಡು ಬರುತ್ತದೆ. ಸಮಸ್ಯೆ ಮತ್ತಷ್ಟು ಉಲ್ಭಣಿಸಿದ ಬಳಿಕ ಪಶ್ಚಾತ್ತಾಪ ಪಡುವುದಕ್ಕಿಂತ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು" ಎಂದಿದ್ದಾರೆ.
ಕುಂದಾಪುರ ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರಿನ ಪ್ರಭಾರಿ ಉದಯಕುಮಾರ್, ರಾಜ್ಯ ಆಹಾರ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಮಂಡಳದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್. ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಅಜಿತ್, ರಾಘವೇಂದ್ರ, ಡಾ.ಶಮಂತ್ ಉಪಸ್ಥಿತರಿದ್ದರು.
=========