ಮಂಗಳೂರು, ಸೆ.17 (DaijiworldNews/PY): ಪಿಎಸ್ಐ ಹಾಗೂ ಪಿಸಿ ಹುದ್ದೆಗಳ ಆಕಾಂಕ್ಷಿಗಳಿಗೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಸೆ.17ರ ಶುಕ್ರವಾರ ಸೈಂಟ್ ಅಲೋಶಿಯಸ್ ಗೋನ್ಝಾಗ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, "ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ಕಮಿಷನರ್ ಹುದ್ದೆಯನ್ನು ವಹಿಸಿಕೊಂಡ ಬಳಿಕ ಅವರು ದ.ಕ ಜಿಲ್ಲೆಯ ಮಣ್ಣಿನ ಮಗನಾಗಿದ್ದಾರೆ. ತುಳು ಭಾಷೆ ಹಾಗೂ ಅದರ ಸಂಸ್ಕೃತಿಯ ಕಡೆಗಿರುವ ಅವರ ಪ್ರೀತಿಯನ್ನು ನಾವು ಕಾಣಬಹುದು. ಕಳೆದ ಒಂದು ತಿಂಗಳಿನಿಂದ ಇದು ಆಕಾಂಕ್ಷಿಗಳಿಗೆ ಕಠಿಣ ತರಬೇತಿಯಾಗಿತ್ತು. ತರಬೇತಿ ಕಠಿಣವಾಗಿದ್ದರೂ ಕೂಡಾ ಯಾವುದೇ ಆಕಾಂಕ್ಷಿಗಳು ತರಬೇತಿಯಿಂದ ಹಿಂದೆ ಸರಿದಿಲ್ಲ. ಇದು ಉತ್ತಮ ಸಂಕೇತ. ಸಮಾಜಕ್ಕೆ ಸೇವೆ ಸಲ್ಲಿಸಲು ಇದು ಉತ್ತಮ ವೃತ್ತಿ" ಎಂದಿದ್ದಾರೆ.
ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸ್ವಾಗತಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಡಿಸಿಪಿ ಹರಿರಾಂ ಶಂಕರ್, ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್, ಎಎಸ್ಎಫ್ ದ.ಕ. ಜಿಲ್ಲಾ ಅಧೀಕ್ಷಕಬಿ ನಿಖಿಲ್, ಸೈಂಟ್ ಅಲೋಶಿಯಸ್ ಕಾಲೇಜಿನ ಮೆಲ್ವಿನ್ ಜೋಸೆಫ್ ಪಿಂಟೋ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಆಗಸ್ಟ್ 9ರಂದು ಮಂಗಳೂರು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ನೋಂದಣಿ ಡೆಸ್ಕ್ ಆರಂಭಿಸಲಾಗಿದ್ದು, ಒಟ್ಟು 734 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿದ್ದರು. ಆ.13ರಂದು ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಗಿದ್ದು, ಆ.16ರಂದು ಆಕಾಂಕ್ಷಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದ್ದು, ಆ.21ರಂದು ಉದ್ಘಾಟನಾ ಸಮಾರಂಭ ನಡೆಸಲಾಗಿತ್ತು.
ತರಬೇತಿ ಕಾರ್ಯಾಗಾರದಲ್ಲಿ 115 ಪುರುಷ ಅಭ್ಯರ್ಥಿಗಳು ಹಾಗೂ 91 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 206 ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಉಡುಪಿ ಸೇರಿದಂತೆ ಉತ್ತರಕನ್ನಡ ಹಾಗೂ ಶಿವಮೊಗ್ಗದಿಂದ ಆಗಮಿಸಿದ್ದರು.
ಅಭ್ಯರ್ಥಿಗಳಿಗೆ 23 ಪೊಲೀಸರು ತರಬೇತಿ ನೀಡಿದ್ದು, ಈ ಪೈಕಿ 14 ಪಿಎಸ್ಐ, 6 ಪ್ರೊಬೇಷನರಿ ಪಿಎಸ್ಐ, 2 ಸಿಪಿಸಿ ಹಾಗೂ ಡಾ.ಪ್ರಶಾಂತ್ ಭಟ್ ಪಾಲ್ಗೊಂಡಿದ್ದರು.