ಉಡುಪಿ, ಸೆ.17 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಬಡವರ ಸೇವೆ ಪ್ರಿಯವಾದುದು. ಸೇವಾ ಚಟುವಟಿಕೆ ನಡೆಸಿದರೆ ಅವರಿಗೆ ಮುದಕೊಡುತ್ತದೆ. ಬೇರೆ-ಬೇರೆ ರೀತಿಯ ಸೇವಾ ಚಟುವಟಿಕೆಯಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ಹಿನ್ನೆಲೆ ಕೊರಗ ಜನಾಂಗದ ಮನೆಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, "ಪ್ರಧಾನಿ ಮೋದಿ ಇಂದು 71ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇಶದ ಬಡಜನರ ಸೇವೆ ಅವರಿಗೆ ಪ್ರಿಯವಾದದ್ದು. ಸೇವಾ ಚಟುವಟಿಕೆ ನಡೆಸಿದರೆ ಅವರಿಗೆ ಮುದಕೊಡುತ್ತದೆ. ಬೇರೆ-ಬೇರೆ ರೀತಿಯ ಸೇವಾ ಚಟುವಟಿಕೆಯಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ದೇಶದ ರಕ್ಷಣೆ ಮತ್ತು ಗೌರವ ಹೆಚ್ಚಿಸಲು ದೇವರು ಅವರಿಗೆ ಶಕ್ತಿ ನೀಡಲಿ. ಶ್ರೀಕೃಷ್ಣ- ಚಾಮುಂಡೇಶ್ವರಿ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಮೈಸೂರು ದೇವಸ್ಥಾನ ಧ್ವಂಸ- ಹಿಂದೂ ಸಂಘಟನೆಗಳ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ದೇವಸ್ಥಾನ ,ಮಸೀದಿ, ಚರ್ಚುಗಳು ನಮ್ಮ ಶ್ರದ್ಧಾ ಕೇಂದ್ರಗಳು. ಶ್ರದ್ಧಾ ಕೇಂದ್ರಗಳ ರಕ್ಷಣೆ ನಮ್ಮ ಜವಾಬ್ದಾರಿ. ಅಕ್ರಮ ಸ್ಥಳದಲ್ಲಿ ಶ್ರದ್ಧಾಕೇಂದ್ರಗಳಿದ್ದರೆ ಪೂರ್ವ ಸೂಚನೆ ನೀಡಬೇಕು. ಸ್ಥಳೀಯ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು . ಬಳಿಕ ತೆರವು ಮಾಡುವ ಬಗ್ಗೆ ಸರಕಾರ ಯೋಚಿಸಬೇಕು. ಶ್ರದ್ಧಾ ಕೇಂದ್ರಗಳ ಬಗ್ಗೆ ಜನರ ನಂಬಿಕೆ ಜಾಸ್ತಿ ಇರುತ್ತದೆ. ಭಕ್ತಿ ಭಾವ ಪ್ರೀತಿ ಜಾಸ್ತಿ ಇರುತ್ತದೆ. ಜನರ ಭಾವನೆಗೆ ನೋವಾದಾಗ ಪ್ರತಿಭಟನೆ ನಡೆಸುತ್ತಾರೆ. ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ. ಅಕ್ರಮ ದೇವಾಲಯ ಕಂಡು ಬಂದರೆ ಊರಿನ ಜನರ ಮನವೊಲಿಸಿ. ಇದು ರಾಜ್ಯ ಸರಕಾರಕ್ಕೆ ನನ್ನ ಪ್ರಾರ್ಥನೆ" ಎಂದು ಮನವಿ ಮಾಡಿದ್ದಾರೆ.
ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ವಿಚಾರದ ಬಗ್ಗೆ ಮಾತನಾಡಿದ ಅವರು, "ಈ ಬಗ್ಗೆ ಇಂದು ಲಕ್ನೋದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಪೆಟ್ರೋಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ ಜನರಿಗೆ ಅನುಕೂಲ ಆಗಬಹುದು. ಪ್ರಧಾನಿ ನರೇಂದ್ರ ಮೋದಿ ಈ ಪ್ರಯತ್ನದಲ್ಲಿದ್ದಾರೆ. ಇವತ್ತು ಕೈಗೊಳ್ಳಬಹುದಾದ ನಿರ್ಧಾರವನ್ನು ದೇಶ ಸ್ವಾಗತಿಸುತ್ತೆ. ಈ ಬಗ್ಗೆ ನನಗೆ ನಂಬಿಕೆ ಇದೆ" ಎಂದಿದ್ದಾರೆ.
ಕ್ರಿಶ್ಚಿಯನ್ ಮಿಷನರಿಗಳಿಂದ ಮತಾಂತರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೇವಲ ಕರಾವಳಿ ಮಾತ್ರವಲ್ಲ, ದೇಶದ ಇತರ ಭಾಗದಲ್ಲೂ ಮತಾಂತರ ನಡೆಯುತ್ತಿದೆ. ಹಿಂದುಗಳ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡು ಮತಾಂತರ ನಡೆಯುತ್ತಿದೆ. ಮತಾಂತರ ಕುರಿತ ಕಾನೂನು ವ್ಯವಸ್ಥೆ ಗಟ್ಟಿಯಾಗಬೇಕು. ಮತಾಂತರ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರವನ್ನು ನಾನು ಆಗ್ರಹಿಸುತ್ತೇನೆ" ಎಂದು ಹೇಳಿದ್ದಾರೆ.