ಬಂಟ್ವಾಳ, ಸೆ 17 (DaijiworldNews/MS): ಪಡಿತರ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೊಡಂಗೆಕೋಡಿಯಲ್ಲಿ ನಡೆದಿದೆ.
ಆರೋಪಿಯನ್ನು ಬಂಟ್ವಾಳ ತಾಲೂಕಿನ ಸಜಿಪನಡು ನಿವಾಸಿ ನೌಫಾಲ್ (26) ಎಂದು ಗುರುತಿಸಲಾಗಿದೆ. ಈತನ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ ಬಿ.ಸಿರೋಡು ಕಡೆಗೆ ಗೂಡ್ಸ್ ಕ್ಯಾರಿಯರ್ ವಾಹನದಲ್ಲಿ ಪಡಿತರ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಬಂಟ್ವಾಳ ಆಹಾರ ಶಾಖೆಯ ಶಿರಸ್ತೇದಾರ್ ನೇತೃತ್ವದ ತಂಡ ಕೊಡಂಗೆಕೋಡಿಯಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದು ಈ ಸಂದರ್ಭದಲ್ಲಿ 50 ಕೆಜಿ 40 ಗೋಣಿಗಳು ಕಂಡುಬಂದಿದ್ದು ಅವುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವಶಪಡಿಸಿಕೊಂಡ ಅಕ್ಕಿ ಚೀಲವನ್ನು ಬಿ.ಸಿ ರೋಡಿನ ಕೆ.ಎಫ್.ಸಿ ಗೋದಾಮಿನಲ್ಲಿ ದಾಸ್ತಾನಿರಿಸಿದೆ. ಆಹಾರ ನಿರೀಕ್ಷಕ ರಾಜ್ ಕುಮಾರ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.