ಕಾರ್ಕಳ, ಸ.16 (DaijiworldNews/HR): ಮಳೆಗಾಲದಲ್ಲಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಡಕಾಗುತ್ತಿರುವ ಹಿನ್ನಲೆಯನ್ನು ಮನಗಂಡು ದೈಜಿವರ್ಲ್ಡ್ ವಾಹಿನಿಯು ಸಪ್ಪೆಂಬರ್ 15ರಂದು ಕಾರ್ಕಳದಲ್ಲಿ ಮೃತ್ಯುಕೂಪ ರಸ್ತೆ ಶೀರ್ಷಿಕೆಯಡಿಯಲ್ಲಿ ಸಚಿತ್ರ ವರದಿ ಪ್ರಸಾರ ಮಾಡಿತು. ಅದಕ್ಕೆ ಪೂರಕವಾಗಿ ಕಾರ್ಕಳ ಪುರಸಭೆಯ ಆಡಳಿತವು ಸ್ಪಂದಿಸಿ ಹೊಂಡ-ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ
ದೈಜಿವರ್ಲ್ಡ್ ಪ್ರತಿನಿಧಿಯ ಕೋರಿಕೆಯ ಮೇರೆಗೆ ಘಟನಾ ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅಗಮಿಸಿ ತತ್ವರಿಗತಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಕೇವಲ 24 ಗಂಟೆಯೊಳಗಾಗಿ ಜಲ್ಲಿಮಿಶ್ರಣದೊಂದಿಗೆ ಸಾಲ್ಮರ್ನ ಮುಖ್ಯ ರಸ್ತೆಯ ಭಾರೀ ಗಾತ್ರದ ಹೊಂಡಗಳನ್ನು ಮುಚ್ಚಲಾಗಿದೆ.
ಗ್ಯಾಲಕ್ಸಿ ಸಭಾಭವನ ಮುಂಭಾಗ, ಮೂರು ಮಾರ್ಗ, ಆನೆಕರೆ, ಕುಂಟಿಬೈಲ್ ರಸ್ತೆ, ಅಂಚೆ ಕಚೇರಿ ರಸ್ತೆ ಸೇರಿದಂತೆ ಕೆಲವೆಡೆಗಳಲ್ಲಿ ಕಾಮಗಾರಿ ಮುಂದುವರಿಯಬೇಕಾಗಿದೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಅಗಮಿಸಿದ ನಗರ ಠಾಣಾಧಿಕಾರಿ ಮುಧು ಬಿ.ಇ ಅವರು ಮುತುವರ್ಜಿ ವಹಿಸಿ ಭಾರೀ ಗಾತ್ರ ಹೊಂಡ ಇರುವ ಪ್ರದೇಶದ ಹಾಗೂ ಕುಸಿದ ಒಳಚರಂಡಿ ಚೇಂಬರ್ ಸನ್ನಿಹದಲ್ಲಿ ಬ್ಯಾರೀಕೇಡ್ಗಳನ್ನು ಇಡುವ ಮೂಲಕ ಮುನ್ನಚ್ಚರಿಕೆ ವಹಿಸಿದ್ದರು.
ಹೊಂಡ-ಗುಂಡಿ ಮುಚ್ಚುವ ಕಾಮಗಾರಿಯನ್ನು ನಡೆಸಲು ಇದೀಗ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮುಂದಾಗಿದ್ದಾರೆ.
ಒಳಚರಂಡಿಯ ಚೇಂಬರ್ ಕುಸಿದು ಹೋಗಿದ್ದು, ಅದರ ದುರಸ್ಥಿ ಕಾಮಗಾರಿ ನಡೆಸಲು ಪುರಸಭೆಯಾಗಲಿ, ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಇದುವರೆಗೆ ಮುಂದಾಗದೇ ಹೋಗಿರುವುದು ವಿಪರ್ಯಾಸವಾಗಿದೆ.