ಕುಂದಾಪುರ, ಸ.16 (DaijiworldNews/HR): ಹೂಳು ತುಂಬಿದ ಕೆರೆಗಳ ಅಭಿವೃದ್ದಿ, ಅಂತರ್ಜಲ ಸಂವರ್ಧನೆಯ ಬಗ್ಗೆ ಸಾರ್ವಜನಿಕ ಕಳಕಳಿ ವ್ಯಕ್ತವಾಗುತ್ತಿದ್ದು, ನೆನೆಗುದಿಗೆ ಬಿದ್ದಿರುವ ಕೆರೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯ ನಡೆಯುತ್ತಿದೆ. ಕುಂದಾಪುರ ತಾಲೂಕಿನ ಅಂಪಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಾರು ಕೆರೆ ಕಾಯಕಲ್ಪಗೊಂಡಿದ್ದು ಅಂಪಾರು-ಸಿದ್ಧಾಪುರ ಮುಖ್ಯ ರಸ್ತೆಯ ಪಾಶ್ರ್ಚದಲ್ಲಿ ಎಲ್ಲರ ಗಮನ ಸಳೆಯುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ಸಹಕಾರದೊಂದಿಗೆ ಅಂಪಾರು ಗ್ರಾಮ ಪಂಚಾಯತ್ ಕಂಚಾರು ಕೆರೆ ಅಭಿವೃದ್ದಿ ಸಮಿತಿ ಇವರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಕೆರೆಗಳ ಪುನಶ್ಚೇತನ ಕಾರ್ಯಕ್ರಮದಡಿ ಈ ಕೆರೆಯನ್ನು ಅಭಿವೃದ್ದಿಗೊಳಿಸಲಾಗಿದೆ.
ಈ ಕೆರೆಯ ಅಭಿವೃದ್ದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.5,45,000 ಅನುದಾನ, ಅಂಪಾರು ಗ್ರಾ.ಪಂ. ಅನುದಾನ ರೂ.50,000, ಹೂಳು ಸಾಗಾಟ ಮೌಲ್ಯ ರೂ.1,80,900 ಒಟ್ಟು ರೂ.7,75,900 ವೆಚ್ಚದಲ್ಲಿ ಕೆರೆಯ ಸಮಗ್ರ ಅಭಿವೃದ್ದಿ ಪಡಿಸಲಾಗುತ್ತಿದೆ. 1.75 ಎಕ್ರೆ ವಿಸ್ತೀರ್ಣದ ಈ ಕೆರೆಯ ಅಭಿವೃದ್ದಿಯ ಬಗ್ಗೆ ಫೆ.22 -2021ರಂದು ಕಾಮಗಾರಿ ಆರಂಭಿಸಲಾಯಿತು. ಸೆ.13-2021ರಂದು ಕಾಮಗಾರಿ ಮುಕ್ತಾಯಗೊಳಿಸಲಾಯಿತು. ಕೆರೆಯ ಸಂಪೂರ್ಣ ಹೂಳು ತಗೆದು ಸುತ್ತ ಬದು ನಿರ್ಮಾಣ ಮಾಡಿ, ಹೆಚ್ಚುವರಿ ನೀರು ಹೊರ ಹೋಗಲು, ನೀರಿನ ಒಳ ಹರಿವಿಗೆ ವ್ಯವಸ್ಥಿತ ಮಾರ್ಗಪಥಗಳನ್ನು ನಿರ್ಮಾಣ ಮಾಡಲಾಗಿದೆ. ಕೆರೆಯ ಸುತ್ತ ಸುಭದ್ರವಾದ ತಂತಿ ಬೇಲಿ ಮಾಡಲಾಗಿದೆ.
ಈ ಕೆರೆಯ ಅಭಿವೃದ್ದಿಯಿಂದ ಅಂತರ್ಜಲ ಮಟ್ಟ ವೃದ್ದಿಸುವುದರೊಂದಿಗೆ ಕೆರೆಯ ಕೆಳಭಾಗದ ರೈತರ ಕೃಷಿ ಭೂಮಿಗೆ ಅನುಕೂಲವಾಗಲಿದೆ. ಪಶು ಪಕ್ಷಿ ಪ್ರಾಣಿಗಳಿಗೂ ನೀರು ಕುಡಿಯಲು ಅನುಕೂಲವಾಗುತ್ತದೆ. ಕಂಚಾರು ಕೆರೆ ಒಂದು ಭಾಗದಲ್ಲಿ ಕಾಡು ಇದ್ದು ಕಾಡು ಪ್ರಾಣಿಗಳ ನೀರಡಿಕೆ ನೀಗಲು ಕಾಡಿನ ಭಾಗದಲ್ಲಿ ಬೇಲಿಯಲ್ಲಿ ಕೂಡಾ ಪ್ರಾಣಿಗಳು ನೀರು ಕುಡಿಯಲು ಬರಲು ಅನುಕೂಲ ಕಲ್ಪಿಸಲಾಗಿದೆ. ಸುತ್ತ ಭದ್ರವಾದ ತಂತಿ ಬೇಲಿ ಮಾಡಿರುವುದರಿಂದ ಜನ ಜಾನುವಾರುಗಳು ಅನಾಹುತ ಸಂಭವಿಸವ ಸಂಭವ ಕಡಿಮೆ. ಸಾಕಷ್ಟು ವಿಸ್ತಾರವಾದ ಕೆರೆ ಇದಾಗಿರುವುದರಿಂದ ಅಂಪಾರು ಭಾಗಕ್ಕೆ ಇದು ತುಂಬಾ ಅನುಕೂಲವಾಗಿದೆ.
ಯೋಜನೆ ಈ ಕೆರೆಯನ್ನು ಅಭಿವೃದ್ದಿ ಪಡಿಸಲು ಮುಂದಾದಾಗ ಸ್ಥಳೀಯ ಪಂಚಾಯತ್ ಸಹಕಾರ ನೀಡಿತು. ಸ್ಥಳೀಯವಾಗಿ ಕೆರೆ ಅಭಿವೃದ್ದಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ತ್ಯಾಗರಾಜ್ ಭಟ್ ಹಾಗೂ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡರು. ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ ಬಿ ಅವರ ಮಾರ್ಗದರ್ಶನ, ಕುಂದಾಪುರ ತಾಲೂಕು ಯೋಜನಾಧಿಕಾರಿ ಕೆ.ಮುರಳಿಧರ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯ ವಲಯ ಮೇಲ್ವಿಚಾರರಕರು, ಸೇವಾ ಪ್ರತಿನಿಧಿಗಳು, ಆಂತರಕ ಲೆಕ್ಕಪರಿಶೋಧಕಿ ಸುನೀತಾ, ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೇಟ್, ಉಪಾಧ್ಯಕ್ಷ ಅಶೋಕ್ ಕುಮಾರ್ ಹೀಗೆ ಎಲ್ಲರ ಒಟ್ಟು ಆಸಕ್ತಿ, ಪರಿಶ್ರಮದಿಂದ ಕೆರೆ ನವನಿರ್ಮಾಣಗೊಂಡು ಬಾಗಿನ ಅರ್ಪಣೆಗೆ ಸನ್ನಧ್ದವಾಗಿದೆ.
ಈ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲು ಪ್ರಮುಖವಾಗಿರುತ್ತದೆ. ಹೂಳನ್ನು ಸ್ಥಳೀಯರು ತಗೆದುಕೊಳ್ಳುತ್ತಾರೆ. ಕೆರೆ ಹೂಳು ಕೃಷಿ ಯೋಗ್ಯವಾದ್ದರಿಂದ ಬೇಡಿಕೆ ಇದೆ. ಕೆಲವೊಂದು ಕೆರೆಗಳಲ್ಲಿ ಕಲ್ಲು ಇರುವುದರಿಂದ ಹೂಳಿಗೆ ಬೇಡಿಕೆ ಕಡಿಮೆ ಇರುತ್ತದೆ. ಒಟ್ಟಾರೆಯಾಗಿ ಅಂಪಾರು ಕಂಚಾರು ಕೆರೆಗೆ ನವ ಕಾಯಕಲ್ಪ ದೊರೆಕಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳುವುದು ಸಾರ್ವಜನಿಕರ ಕೈಯಲ್ಲಿದೆ.
‘ನಮ್ಮೂರು ನಮ್ಮ ಕೆರೆ’ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಕಲ್ಪನೆ. ಜನರಲ್ಲಿ ನೀರಿನ ಬಗ್ಗೆ ಜಲಜಾಗೃತಿ, ಸಾರ್ವಜನಿಕ ಸಹಭಾಗಿತ್ವದೊಂದಿಗೆ ಅಭಿಮಾನವೂ ಮೂಡಬೇಕು ಎನ್ನುವ ಹಿನ್ನೆಲೆಯಲ್ಲಿ ನಮ್ಮೂರು ನಮ್ಮ ಕೆರೆ ಎಂದು ನಾಮಕರಣ ಮಾಡಲಾಗಿದೆ. 6 ವರ್ಷದಿಂದ ಈ ಯೋಜನೆ ಅನುಷ್ಠಾನದಲ್ಲಿದ್ದು ಕಳೆದ 2 ವರ್ಷಗಳಿಂದ ಕರ್ನಾಟಕ ಸರ್ಕಾರದ ಕೆರೆ ಸಂಜೀವಿನಿ ಕಾರ್ಯಕ್ರಮಡಿ ಒಡಂಬಡಿಕೆ ಮಾಡಿಕೊಂಡು ಕೆರೆ ಪ್ರಾಧಿಕಾರದ ಮೂಲಕವೂ ಕಾರ್ಯನಿರ್ವಹಿಸುತ್ತಿದೆ. ನಮ್ಮೂರು ನಮ್ಮ ಕೆರೆ ಯೋಜನೆಯಡಿ ಈ ತನಕ 390 ಕೆರೆ ನಿರ್ಮಾಣ ಮಾಡಲಾಗಿದೆ. ಕೆರೆ ಪ್ರಾಧಿಕಾರದಡಿ 63 ಕೆರೆಗಳ ಅಭಿವೃದ್ದಿ ಮಾಡಲಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿ 390 ಕೆರೆಗಳ ಅಭಿವೃದ್ದಿಗೆ ಯೋಜನೆಯಿಂದ 21ಕೋಟಿ 46 ಲಕ್ಷ ವ್ಯಯಿಸಲಾಗಿದೆ. 16.23 ಲಕ್ಷ ಸ್ಥಳೀಯ ಪಾಲು ಆಗಿದೆ. 1.65 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಂಡಿವೆ. ಉಡುಪಿ ಜಿಲ್ಲೆಯಲ್ಲಿ 10 ಕೆರೆಗಳ ಅಭಿವೃದ್ದಿ ಮಾಡಲಾಗಿದೆ ಎಂದು ಧ.ಗ್ರಾ ಯೋಜನೆ ಉಡುಪಿ ಜಿಲ್ಲೆಯ ನಿರ್ದೇಶಕ ಗಣೇಶ್ ಬಿ ತಿಳಿಸಿದ್ದಾರೆ.