ಕಾರ್ಕಳ, ಸೆ.16 (DaijiworldNews/PY): "ನ್ಯಾಯಾಲಯಗಳ ಆದೇಶವನ್ನು ದುರುಪಯೋಗ ಪಡಿಸಿಕೊಂಡು ದೇವಸ್ಥಾನಗಳನ್ನು ಒಡೆದು ಹಾಕುತ್ತಿರುವ ಬಿಜೆಪಿಯ ಧರ್ಮ ತಿಳಿಗೇಡಿತನದ ತಪ್ಪನ್ನು ಸ್ಥಳೀಯ ಅಧಿಕಾರಿಗಳ ಮೇಲೆ ಹೊರಿಸುವ ಮೂಲಕ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ತಮ್ಮ ಪಕ್ಷದ ಮಾನ ಉಳಿಸಲು ನೋಡುತ್ತಿರುವುದು ವಿಷಾದನೀಯ. ಅನಿವಾರ್ಯವಾಗಿ ಕರ್ತವ್ಯ ಮೆರೆದ ಅಧಿಕಾರಿಗಳನ್ನು ಅಮಾನತು ಮಾಡುವ ಮೊದಲು ಒಡೆಯಲು ಆದೇಶ ನೀಡಿದ ಸರಕಾರ ಮತ್ತು ಅದರ ಮುಖ್ಯಸ್ಥರು ಹಿಂದೂ ಧರ್ಮದ್ರೋಹದ ಹೊಣೆಹೊತ್ತು ಮೊದಲು ರಾಜೀನಾಮೆ ಕೊಡಬೇಕು" ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
"2009ರ ಸುಪ್ರೀಂ ಕೋರ್ಟು ಆದೇಶವಾಗಲಿ ಆ ನಂತರದ ಹೈಕೋರ್ಟ್ ಆದೇಶಗಳಾಗಲಿ ಸಾರ್ವಜನಿಕ ಸ್ಥಳಗಳಲ್ಲಿ ಸರಕಾರಗಳ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸ ಬೇಕೆಂದು ಆದೇಶಿಸಿವೆಯೇ ಹೊರತು ಒಡೆಯ ಬೇಕೆಂದು ಹೇಳಿಲ್ಲ. ತೆರವಿನ ಆದೇಶಕ್ಕೆ ಒಡೆಯುವ ವ್ಯಾಖ್ಯಾನ ನೀಡಿರುವ ಬಿಜೆಪಿಯ ಧರ್ಮರಾಜಕೀಯದ ಹಿಂದೆ ಪುರಾಣವನ್ನು ಇತಿಹಾಸವನ್ನಾಗಿಸುವ ಷಢ್ಯಂತ್ರ ಅಡಗಿದೆ. ದೇಶದಲ್ಲಿರುವ ಸುಮಾರು 20 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಬಹಳಷ್ಟು ದೇವಸ್ಥಾನಗಳು ಪೌರಾಣೀಕ ಹಿನ್ನೆಲೆಯಿಲ್ಲದ ಚಾರಿತ್ರಿಕ ದೇವಸ್ಥಾನಗಳು, ಬಹಳಷ್ಟು ದೇವಸ್ಥಾನಗಳು ಜನಪದೀಯ ಮತ್ತು ಸಾಮಾಜಿಕ ಸಂಘಟನೆಗಳಿಗೆ ಸಂಬಂಧ ಪಟ್ಟವುಗಳು. ಕೋರ್ಟ್ ಆದೇಶದ ನೆಪದಲ್ಲಿ ಅಭಿವೃದ್ದಿಯ ಹೆಸರಲ್ಲಿ ಇಂತವುಗಳನ್ನು ಒಡೆದು ಪೌರಾಣಿಕ ದೇವಸ್ಥಾನಗಳನ್ನು ಮಾತ್ರ ಉಳಿಸಿ, ಇತಿಹಾಸವನ್ನು ಮುಚ್ವಿಹಾಕಿ ಪುರಾಣವನ್ನು ಇತಿಹಾಸವನ್ನಾಗಿಸುವ ಷಡ್ಯಂತ್ರ ಅಡಗಿದೆ. ಇದಕ್ಕೆ ಮೈಸೂರಿನ ಘಟನೆ ಒಂದು ಉದಾಹರಣೆ" ಎಂದು ಕಾಂಗ್ರೆಸ್ ಹೇಳಿದೆ.
"ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದುತ್ವದ ಆಸ್ಮಿತೆ ಆಗಿರುವ ದೇಗುಲಗಳನ್ನೆ ಒಡೆದು ಹಾಕುವುದು ಇದು ಮೊದಲಲ್ಲ. ಗುಜರಾತಿನಲ್ಲಿ ಮೋದಿ ಆಡಳಿತಾವಧಿಯಲ್ಲಿ ಇದೇ ರೀತಿ 80ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳನ್ನು ಕೆಡವಿ ಹಾಕಲಾಗಿತ್ತು. ಉತ್ತರ ಪ್ರದೇಶದ ಆದಿತ್ಯನಾಥ್ ಆಡಳಿತದಲ್ಲೂ ಇದು ಮುಂದುವರಿಯುತ್ತಿದ್ದು ಇದೀಗ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಆರಂಭಗೊಂಡಿರುವುದು ಖಂಡನೀಯ. ಸರಕಾರ ಕೂಡಲೇ ದೇವಸ್ಥಾನಗಳನ್ನು ಒಡೆದು ಹಾಕುವ ಕೆಲಸ ನಿಲ್ಲಿಸಬೇಕು. ಕೋರ್ಟ್ ಆದೇಶದ ವ್ಯಾಪ್ತಿಯಡಿಯಲ್ಲಿ ಬರುವ ದೇವಸ್ಥಾನಗಳನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ಥಳಾಂತರಿಸಬೇಕು. ಈಗಾಗಲೇ ಒಡೆದು ಹಾಕಿರುವ ದೇವಸ್ಥಾನಗಳ ಪುನರ್ನಿರ್ಮಾಣಕ್ಕೆ ಸ್ಥಳ ಒದಗಿಸಿ ಆರ್ಥಿಕ ನೆರವು ಒದಗಿಸಬೇಕು" ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ