ಮಂಗಳೂರು, ಸ.16 (DaijiworldNews/HR): ಕೊವೀಡ್ ಸಾಂಕ್ರಮಿಕದ ಬಳಿಕ ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ ತುಳು ನಾಟಕ ಸಿನಿಮಾ ಯಕ್ಷಗಾನ ಮತ್ತು ಸಂಗೀತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದ್ದು ಹತ್ತು ಸಾವಿರಕ್ಕೂ ಹೆಚ್ಚು ಕಲಾವಿದರು ನಿರುದ್ಯೋಗಿಗಳಾಗಿದ್ದಾರೆ. ತುಳು ಸಿನಿಮಾ ಮತ್ತು ರಂಗಭೂಮಿ ಕಲಾವಿದರು ಕರಾವಳಿಯ ಕಲಾವಿದರ ಬದುಕು ಕಟ್ಟಲು ಸರ್ಕಾರವು ತಕ್ಷಣವೇ ಕಲಾತ್ಮಕ ಚಟುವಟಿಕೆ ಆರಂಭಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾತನಾಡಿದ ನಟ ಮತ್ತು ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್, "ಪ್ರಸ್ತುತ ಎಲ್ಲಾ ಚಟುವಟಿಕೆಗಳು ನಡೆಯುತ್ತಿದೆ ಆದರೆ ನಾಟಕ ಯಕ್ಷಗಾನ ಚಲನಚಿತ್ರಗಳು ಮತ್ತು ಸಂಗೀತ ಕಾರ್ಯಕ್ರಮಕ್ಕೆ ಮಾತ್ರ ಅವಕಾಶವಿಲ್ಲ ಇದರ ಪರಿಣಾಮವಾಗಿ ಕರಾವಳಿಯಲ್ಲಿ ಸಾವಿರಾರು ಕಲಾವಿದರು ಕಳೆದ ಎರಡು ವರ್ಷಗಳಿಂದ ಕಷ್ಟದಲ್ಲಿ ಬದುಕುತ್ತಿದ್ದಾರೆ ಕಲಾವಿದರ ಪರವಾಗಿ ಸರ್ಕಾರ ಸ್ಪಂದಿಸಬೇಕು" ಎಂದು ಹೇಳಿದರು.
ನಾವು ಕಲಾವಿದರು ಸ್ವಾಭಿಮಾನಿಗಳು ನಮಗೆ ಸರ್ಕಾರಿ ಕಿಟ್ ಅಥವಾ ನೆರವು ಬೇಕಿಲ್ಲ ನಮ್ಮನ್ನು ಬದುಕಲು ಬಿಡಿ ಕಲಾ ಚಟುವಟಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಡಲಿ ಎಂದು ನಿರ್ದೇಶಕ ವಿಜಯ್ ಕುಮರ್ ಕೊಡಿಯಲ್ಬೈಲ್ ಒತ್ತಾಯಿಸಿದರು.
ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, "12 ತುಳು ಸಿನಿಮಾಗಳು ಬಿಡುಗಡೆಗೆ ಬಾಕಿ ಇದೆ ಚಲನಚಿತ್ರಗಳು ಮತ್ತು ನಾಟಕವನ್ನೇ ನಂಬಿಕೊಂಡು ಬದುಕುವ ಕಲಾವಿದರು ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಶೆಟ್ಟಿ, ಮೋಹನ್ ಕೊಪ್ಪಳ ಉಪಸ್ಥಿತರಿದ್ದರು.