ಮಂಗಳೂರು, ಸ.16 (DaijiworldNews/HR): ದ.ಕ. ಜಿಲ್ಲೆ ಸಹಿತ ರಾಜ್ಯದ ಕೆಲವು ಕಡೆಗಳಿಂದ ಕಳೆದೊಂದು ವಾರದ ಅವಧಿಯಲ್ಲಿ ನಿಷೇಧಿತ 'ತುರಾಯಾ ಸ್ಯಾಟಲೈಟ್ ಫೋನ್' ಮೂಲಕ ವಿದೇಶಕ್ಕೆ ಸಂಪರ್ಕ ಆಗಿರುವುದರ ಕುರಿತು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ.
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕು, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಅರಣ್ಯ ಭಾಗದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ನೆಟ್ವರ್ಕ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಕೆಲವು ಬಾರಿ ಈ ರೀತಿಯ ಫೋನ್ ನೆಟ್ವರ್ಕ್ಗಳು ಪತ್ತೆಯಾಗಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಆದರೆ ಪೊಲೀಸರು ಖಚಿತಪಡಿಸಿರಲಿಲ್ಲ.
ಜಿಲ್ಲೆಗಳ ಗುಡ್ಡಗಾಡು ಮತ್ತು ದಟ್ಟ ಅರಣ್ಯ ಪ್ರದೇಶಗಳನ್ನು ಶಂಕಿತ ಭಯೋತ್ಪಾದಕರು ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ನಡೆಸಲು ಆಶ್ರಯವಾಗಿ ಬಳಸಲಾಗುತ್ತಿದೆ. ಮೂಲಗಳ ಪ್ರಕಾರ ಕರ್ನಾಟಕದ ಈ ಸ್ಥಳಗಳಿಂದ ಕಳೆದ ವಾರ ವಿದೇಶಿ ಸ್ಥಳಗಳಿಗೆ ಕರೆಗಳನ್ನು ಮಾಡಲಾಗಿದೆ.
ಶ್ರೀಲಂಕಾದ 12 ಶಂಕಿತ ಐಎಸ್ ಭಯೋತ್ಪಾದಕರು ಮೀನುಗಾರರ ಸೋಗಿನಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ನುಸುಳಿದ್ದಾರೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಶಂಕಿತ ಭಯೋತ್ಪಾದಕರಿಂದ ಈ ಕರೆಗಳನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಈ ಕರೆಗಳನ್ನು ಕರ್ನಾಟಕದ ತುರಾಯಾ ಸ್ಯಾಟಲೈಟ್ ಫೋನ್ ಗಳಿಂದ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಶಂಕಿತ ಭಯೋತ್ಪಾದಕರು 2012 ರಿಂದ ಭಾರತದಲ್ಲಿ ನಿಷೇಧಿಸಲಾದ ತುರಾಯ ಸ್ಯಾಟಲೈಟ್ ಫೋನ್ಗಳನ್ನು ಬಳಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಶಂಕಿಸಿವೆ.
ಇನ್ನು ದ.ಕ. ಜಿಲ್ಲೆಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಅಧಿಕೃತವಾಗಿ ಯಾವುದೇ ರೀತಿಯ ಮಾಹಿತಿ ನಮಗೆ ಲಭಿಸಿಲ್ಲ’ ಎಂದು ದ.ಕ. ಎಸ್ಪಿ ಹೃಷಿಕೇಶ್ ಸೋನಾವಣೆ ಅವರು ಪ್ರತಿಕ್ರಿಯಿಸಿದ್ದಾರೆ.