ಉಳ್ಳಾಲ, ಸೆ. 15 (DaijiworldNews/SM): ಚೆಂಬುಗುಡ್ಡೆ ಮೆಸ್ಕಾಂ ಸಬ್ ಡಿವಿಷನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಶಾಕ್ ತಗಲಿ ಗಂಭೀರ ಗಾಯಗೊಂಡಿರುವ ಘಟನೆ ಚೆಂಬುಗುಡ್ಡೆ ಮೆಸ್ಕಾಂ ಕಚೇರಿ ಸಮೀಪ ಬುಧವಾರ ಸಂಜೆ ವೇಳೆ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಮಣಿಕಟ್ಟೆ ನಿವಾಸಿ ಬೊಮ್ಮಪ್ಪ(26) ಗಾಯಾಳುವಾಗಿದ್ದಾರೆ. ಮೆಸ್ಕಾಂ ಗುತ್ತಿಗೆದಾರ ಪ್ರವೀಣ್ ಸುವರ್ಣ ಎಂಬವರ ಕೈಕೆಳಗೆ ಗುತ್ತಿಗೆ ಆಧಾರದಲ್ಲಿ ಬೊಮ್ಮಪ್ಪ ಕಳೆದ ಐದು ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಸಬ್ ಡಿವಿಷನ್ ನಲ್ಲಿ ಪೈಂಟಿಂಗ್ ನಡೆಸುವ ಸಂದರ್ಭ, ಬೇರೊಂದು ಲೈನ್ ನಲ್ಲಿದ್ದ ವಿದ್ಯುತ್ ಪ್ರವಹಿಸಿ ಬೊಮ್ಮಪ್ಪ ಅವರ ಸೊಂಟದ ಕೆಳಗಿನಿಂದ ಬೆಂಕಿ ತಗಲಿದೆ.
ತಕ್ಷಣ ವಿದ್ಯುತ್ ಸ್ಥಗಿತಗೊಂಡರೂ, ಸೊಂಟದ ಕೆಳಗೆ ಹತ್ತಿದ ಬೆಂಕಿಯಿಂದಾಗಿ ಗಂಭೀರ ತರಹದ ಸುಟ್ಟ ಗಾಯಗಳಾಗಿವೆ. ತಕ್ಷಣ ಸಹೋದ್ಯೋಗಿಗಳು ಏಣಿ ಮೂಲಕ ಸಬ್ ಡಿವಿಷನ್ ಮೇಲೇರಿ ಬೊಮ್ಮಪ್ಪ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.