ಉಡುಪಿ, ಸೆ.15 (DaijiworldNews/PY): "ಉಡುಪಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಮೂಲಕ ಇದೇ ಸೆಪ್ಟೆಂಬರ್ 17 ರಂದು, 18 ವರ್ಷ ಮೇಲ್ಪಟ್ಟ ಅರ್ಹರಿಗೆ ಕೊರೊನಾ ಲಸಿಕೆ ನೀಡಲು ಲಸಿಕಾ ಮಹಾಮೇಳವನ್ನು ಹಮ್ಮಿಕೊಂಡಿದೆ" ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
"ಒಟ್ಟು ಜಿಲ್ಲೆಯಲ್ಲಿ 80,000 ಡೋಸ್ ಲಸಿಕೆ ಲಭ್ಯವಿದ್ದು, ಗ್ರಾಮ ಪಂಚಾಯತ್ ಮತ್ತು ನಗರ ವ್ಯಾಪ್ತಿಯಲ್ಲಿ 300 ಲಸಿಕಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೊದಲ ಡೋಸ್ ಪಡೆಯಲು 1,58,000 ಮಂದಿ ಬಾಕಿ ಇದ್ದರೆ, ಎರಡನೇ ಡೋಸ್ ಪಡೆಯಲು ಸುಮಾರು 33,266 ಮಂದಿ ಬಾಕಿ ಇದ್ದಾರೆ. ಕರ್ನಾಟಕ ಸರಕಾರದ ಪ್ರಕಾರ ನವೆಂಬರ್ 30 ಒಳಗಾಗಿ ರಾಜ್ಯದ ಎಲ್ಲಾ ಅರ್ಹ 18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕೊರೊನಾ ಲಸಿಕಾಕರಣ ನೀಡುವಲ್ಲಿ ನೂರು ಪ್ರತಿಶತ ಪ್ರಗತಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ" ಎಂದು ಹೇಳಿದ್ದಾರೆ.
"ಉಡುಪಿ ಜಿಲ್ಲೆಯಲ್ಲಿ ಒಟ್ಟು 18 ವರ್ಷ ಮೇಲ್ಪಟ್ಟವರ ಗುರಿ 10,02,762 ಆಗಿದ್ದು, ಇದುವರೆಗೆ 1ನೇ ಡೋಸ್ ಲಸಿಕೆಯನ್ನು 847,940 (84.6%) ಜನರಿಗೆ ನೀಡಲಾಗಿದೆ ಹಾಗೂ ಇವರಲ್ಲಿ ಈಗಾಗಲೇ 3,45,558 (34.5%) ಜನರು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಈ ಮೆಗಾ ಮೇಳದಲ್ಲಿ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳು, ಆಯುಷ್ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು, ಹಿರಿಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಟಾಸ್ಕ್ ಫೋರ್ಸ್ ಕಮಿಟಿಯ ಸದಸ್ಯರು, ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳು ಹಾಗೂ ಶುಕ್ರೂಷಕ ಸಿಬ್ಬಂದಿ, ನರ್ಸಿಂಗ್ ಕಾಲೇಜಿನ ಶುಕ್ರೂಷಕರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಭಾಗವಹಿಸಲಿದ್ದಾರೆ.
ಪ್ರಥಮ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಮತ್ತು ಪ್ರಥಮ ಡೋಸ್ ಲಸಿಕೆ ಪಡೆದು 84 ದಿವಸ ದಾಟಿದವರು ಈ ಲಸಿಕಾ ಮೆಗಾ ಮೇಳದಲ್ಲಿ ಭಾಗವಹಿಸಬಹುದು. ಈಗಾಗಲೇ ಲಸಿಕೆ ಪಡೆಯಲು ಅಸಾಧ್ಯವಾದವರ ಪರಿಶೀಲನೆಯನ್ನು, ಆ ಪ್ರಕಾರ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಈ ಅಭಿಯಾನಕ್ಕೆ ಸರಕಾರೇತರ ಸಂಘ ಸಂಸ್ಥೆಗಳ ಸಹಕಾರವನ್ನು ಕೂರ್ಮರಾವ್ ಕೋರಿದ್ದಾರೆ
ಕೊರೊನಾ ಲಸಿಕಾಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 16ರ ಬೆಳಿಗ್ಗೆ 10.00 ರಿಂದ 1100 ಗಂಟೆಯವರೆಗೆ ಪೋನ್ ಇನ್ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನವೀನ್ ಭಟ್, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಅಶ್ವಿನಿ ಕುಮಾರ್ ಇವರು ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾರ್ವಜನಿಕರು ಕೊರೊನಾ ಲಸಿಕೆಗೆ ಸಂಬಂಧಿಸಿ ಪ್ರಶ್ನೆಗಳನ್ನು ಮತ್ತು ಸಂದೇಹಗಳಿಗೆ ದೂರವಾಣಿ ಸಂಖ್ಯೆ - 9663957222 ನ್ನು ಸಂಪರ್ಕಿಸುವಂತೆ ತಿಳಿಸಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ ನವೀನ್ ಭಟ್ ವೈ , ಅಪರ ಜಿಲ್ಲಾಧಿಕಾರಿಯಾಗಿರುವ ಸದಾಶಿವ ಪ್ರಭು ಉಪಸ್ಥಿತರಿದ್ದರು.