ಮಂಗಳೂರು ಸೆ 15 (DaijiworldNews/MS): 'ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳನ್ನು ಕೆಡವಲು ಮುಂದಾಗಿದ್ದ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಸೆ.15 ಬುಧವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಹರೀಶ್ ಕುಮಾರ್, "ಬಿಜೆಪಿ ಹಿಂದೂಗಳ ಮತದಿಂದ ಸರ್ಕಾರ ರಚಿಸಿದ್ದು, ಹಿಂದುತ್ವವನ್ನು ಗುತ್ತಿಗೆಗೆ ಪಡೆದುಕೊಂಡಿದೆ. ಆದರೆ ಇಂದು ಬಿಜೆಪಿ ಸರ್ಕಾರ ದೇವಾಲಯಗಳ ಧ್ವಂಸದ ಮೂಲಕ ತಮ್ಮ ನಿಜವಾದ ಬಣ್ಣ ಬಯಲುಮಾಡಿದ್ದಾರೆ" ಎಂದು ಲೇವಡಿ ಮಾಡಿದರು.
ಅನಧಿಕೃತ ಧಾರ್ಮಿಕ ಕಟ್ಟಡವನ್ನು ಕೆಡವಿದ ಕುರಿತು ಮೈಸೂರು ಜಿಲ್ಲಾಡಳಿತಕ್ಕೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ. ನಿಸ್ಸಂದೇಹವಾಗಿ ದೇವಾಲಯ ಕೆಡವಿರುವುದರ ಹಿಂದೆ ಸರ್ಕಾರದ ಕೈವಾಡವಿದೆ, ಯಾವುದೇ ಉಪ ಆಯುಕ್ತರು ಮತ್ತು ತಹಶೀಲ್ದಾರ್ ಅವರು ಸರ್ಕಾರದ ಕೃಪೆ ಇಲ್ಲದೆ ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವ ಧೈರ್ಯವಿಲ್ಲ. ಹೀಗಾಗಿ ಇದು ರಾಜಕೀಯ ಪ್ರಾಯೋಜಿತ ನಡೆಯಾಗಿದೆ ಎಂದು ಆರೋಪಿಸಿದರು.
"ಬಿಜೆಪಿ ಸರ್ಕಾರದ ವಿರುದ್ದ ಹಿಂದೂ ಸಂಘಟನೆಗಳು ಮತ್ತು ಅವರ ಪಕ್ಷದ ನಾಯಕರು ಈ ನಡೆಯ ವಿರುದ್ದ ಟೀಕಿಸಿದ್ದಾರೆ. ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ, ಇದು ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸುವ ನಾಟಕವಾಗಿದೆ. ರಾಜ್ಯದ ಜನರು ಈ ನಾಟಕದಿಂದ ಬೇಸತ್ತಿದ್ದು ಇದನ್ನು ಮತ್ತಷ್ಟು ಪ್ರೋತ್ಸಾಹಿಸುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ದೇವಸ್ಥಾನಗಳನ್ನು ಕೆಡವಲು ಯಾವುದೇ ಆತುರವಿಲ್ಲ ಎಂದು ಹೇಳಿದ್ದರೆ ಅಂದರೆ ನಿಧಾನವಾಗಿ ಅದನ್ನು ನೆಲಸಮ ಮಾಡಬೇಕೆ? ಇದು ಅವರ ಮಾತಿನ ಅರ್ಥವೇ" ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
"ದೇವಾಲಯ ಕೆಡವಿದರ ಬಗ್ಗೆ ಮುಖ್ಯಮಂತ್ರಿ ಕ್ಷಮೆ ಕೇಳಬೇಕು ಹಾಗೂ ದೇವಾಲಯ ನಿರ್ಮಿಸಲು ಸ್ಥಳವನ್ನು ಗುರುತಿಸಿ ಕೆಡವಲಾಗಿರುವ ದೇವಸ್ಥಾನಗಳನ್ನು ಪುನರ್ ನಿರ್ಮಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಹರೀಶ್ ಕುಮಾರ್ ಹೇಳಿದರು.