ಕಾರ್ಕಳ, ಸೆ 14 (DaijiworldNews/MS): ಕಾರ್ಕಳ ತಾಲೂಕು ಕೇಂದ್ರೀಕೃತವಾಗಿರಿಸಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಹಲವು ಯೋಜನೆಗಳು ಮಂಜೂರಾಗುತ್ತಿದ್ದರೂ, ಅನುಷ್ಠಾನದಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದಾಗಿ ಹಲವು ಸಮಸ್ಯೆಗಳು ಎದುರುಗೊಳ್ಳುತ್ತಿದೆ. ಕಾರ್ಕಳ ನಗರದ ಪ್ರಮುಖ ರಸ್ತೆಯನ್ನು ಅವಲೋಕಿಸಿದರೆ ಮಳೆಗಾಲದಲ್ಲಿ ನಗರದ ಇಕ್ಕಟ್ಟಾದ ಎಲ್ಲಾ ಪ್ರಮುಖ ರಸ್ತೆಗಳು ಸಂಪೂರ್ಣ ಹೊಂಡಮಯವಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳ ಓಡಾಟ ತೊಡಕಾಗುತ್ತಿದೆ.
ಕಾರ್ಕಳ ನಗರದ ಮೂರು ಮಾರ್ಗ, ಅಂಚೆ ಕಚೇರಿ ರಸ್ತೆ, ಸಾಲ್ಮರ್, ತಾಲೂಕು ಜಂಕ್ಷನ್ನ ರಸ್ತೆ ಪೂರ್ತಿ ದುಸ್ಥಿತಿಯಲ್ಲಿದೆ. ಕಾರು, ರಿಕ್ಷಾ ಸಹಿತ ಬೈಕ್ಗಳ ಓಡಾಟಕ್ಕೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕರೋನಾ ಸಂಕಷ್ಟ, ಇಂಧನ ಬೆಲೆ ಏರಿಕೆಯ ನಡುವೆ ವಾಹನಗಳನ್ನು ರಸ್ತೆಗೆ ಇಳಿಸಿದರೆ ವಾಹನಗಳ ತಳಭಾಗವು ರಸ್ತೆಯ ಹೊಂಡ ಗುಂಡಿಗೆ ತಾಗಿ ಜಖಂಗೊಳ್ಳುತ್ತಿರುವುದರಿಂದ ವಾಹನಗಳ ದುರಸ್ಥಿಗೆ ಮಾಲಕರ ಕಿಸೆಗೆ ಕತ್ತರಿ ಬೀಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಬಾಯಿ ತೆರೆದ ಒಳಚರಂಡಿ ಚೇಂಬರ್ಗಳು
ಮಾಜಿ ಮುಖಮಂತ್ರಿ ಎಂ.ವೀರಪ್ಪ ಮೊಯಿಲಿಯವರು ರಾಜ್ಯದ ಮುಖಮಂತ್ರಿ ಯಾಗಿದ್ದಾಗ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲಿಗೆ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಿರುವುದು ಕಾರ್ಕಳದಲ್ಲಿ. ಬೆಳೆಯುತ್ತಿರುವ ಕಾರ್ಕಳ ನಗರದಿಂದಾಗಿ ತಲೆಎತ್ತಿರುವ ವಾಣಿಜ್ಯ ಮಹಡಿ, ವಸತಿ ಸಂಕೀರ್ಣ,ಮನೆಗಳಿಂದ ಉತ್ಪಾದನೆಯಾಗುತ್ತಿರುವ ತ್ಯಾಜ್ಯ ನೀರು ಹರಿದು ಹೋಗಲು ತೊಡಗಾಗುತ್ತಿದ್ದುದರಿಂದ ಹಾಗೂ ಅನುಷ್ಠಾನಗೊಂಡಿದ್ದ ಒಳಚರಂಡಿ ಯೋಜನೆಗೆ ಹಲವು ದಶಕ ಸಂದಿರುವುದರಿಂದ ಕಳೆದ ಎರಡು ವರ್ಷಗಳ ಹಿಂದೆ ಒಳಚರಂಡಿ ಯೋಜನೆಯ ಪುನರ್ ನಿರ್ಮಾಣಕ್ಕೆ ಶಾಸಕ ವಿ.ಸುನೀಲ್ಕುಮಾರ್ ಚಾಲನೆ ನೀಡಿದ್ದರು.
ಕರ್ನಾಟಕ ಸರಕಾರದಿಂದ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯ ಮೂಲಕ ರೂ 13 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಸಮಗ್ರ ಒಳಚರಂಡಿ ಯೋಜನೆಗಾಗಿ ರೂ. 17 ಕೋಟಿ ಪ್ರಸ್ತಾವನೆಯನ್ನು ಕಾರ್ಕಳ ಪುರಸಭೆ ಮುಂದಿರಿಸಿದೆ.
ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಕಳ ಶಾಖೆಯ ತನಕ ಮೊದಲ ಹಂತದಲ್ಲಿ ಒಳ ಚರಂಡಿ ಯೋಜನೆ ಕಾಮಗಾರಿಯನ್ನು ಕರ್ನಾಟಕ ಸರಕಾರದಿಂದ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯು ಪೂರ್ಣಗೊಳಿಸಿದೆ. ಕಾಮಗಾರಿ ನಡೆದು ಎರಡು ವರ್ಷ ಸಂದಿದ್ದು, ನೂತನವಾಗಿ ನಿರ್ಮಿಸಲಾಗಿದ್ದ ಒಳಚರಂಡಿ ಚೇಂಬರ್ನಿಂದ ತ್ಯಾಜ್ಯ ನೀರು ಹೊರ ಸೋಸುತ್ತಿರುವುದರಿಂದ ಪರಿಸರದಲ್ಲಿ ದುರ್ವಾನೆ ಬೀರುತ್ತಾ ಸಾಂಕ್ರಾಮಿಕ ರೋಗ ಹರಡುತ್ತಿದೆ. ಒಳಚರಂಡಿ ಪುನರ್ ನಿರ್ಮಾಣ ಕಾಮಗಾರಿ ಇತರೆಡೆಗಳಲ್ಲಿ ಇನ್ನೂ ಪೂರ್ಣಗೊಂಡಿಲ್ಲ.ಒಳಚರಂಡಿಯ ಹಳೆ ಚೇಂಬರ್ಗಳು ಕುಸಿಯುತ್ತಿದ್ದು ಪುರಸಭಾ ಆಡಳಿತ ಮಂಡಳಿ ಹಾಗೂ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯು ಗಮನ ಹರಿಸದೇ ಹಲವು ಅನಾಹುತಕ್ಕೆ ಎಡ ಮಾಡುತ್ತಿದೆ.
ಕಾಳಜಿಗೆ ಸ್ಪಂದಿಸಿದ ನಗರ ಠಾಣಾಧಿಕಾರಿ ಮಧು:
ರಸ್ತೆಯಲ್ಲಿ ಒಳಚರಂಡಿ ಚೇಂಬರ್ ಬಾಯಿ ತೆರೆದಿರುವ ವಿಚಾರವನ್ನು ದೈಜಿವಲ್ಡ್ ವರದಿಗಾರರು ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹಾಗೂ ನಗರ ಠಾಣಾಧಿಕಾರಿ ಮಧು ಅವರ ಗಮನಕ್ಕೆ ತಂದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹಾಗೂ ಇತರ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಅಗಮಿಸಿ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರ ಠಾಣಾಧಿಕಾರಿ ಮಧು ಬಿ.ಇ ಅವರು ಘಟನಾ ಸ್ಥಳಕ್ಕೆ ಅಗಮಿಸಿ ಬ್ಯಾರಿಕೇಡ್ ತಂದು ಇರಿಸಿ ಮನ್ನೆಚ್ಚರಿಕೆ ವಹಿಸಿದ್ದಾರೆ. ಅವರ ಕಾರ್ಯದಕ್ಷತೆಗೆ ನಾಗರಿಕರಿಂದ ಪ್ರಶಂಸೆ ವ್ಯಕ್ತಗೊಂಡಿದೆ.
ಪ್ಯಾಚ್ವಕ್ಸ್ ಕಾಮಗಾರಿ ನೆಪದಲ್ಲಿ ಬೊಕ್ಕಸಕ್ಕೆ ಕನ್ನ:
-ಅಶ್ಪಕ್ ಅಹಮ್ಮದ್ ವಿಪಕ್ಷ ನಾಯಕ ಕಾರ್ಕಳ ಪುರಸಭೆ
ಕಳೆದ ವರ್ಷದ ಮಳೆಗಾಲದ ನಂತರದಲ್ಲಿ ರಸ್ತೆ ಪ್ಯಾಚ್ವರ್ಕ್ಸ್ ಕಾಮಗಾರಿ ನಡೆಸಲಾಗಿದ್ದು, ಲಕ್ಷಾಂತರ ವೆಚ್ಚ ಭರಿಸಲಾಗಿತ್ತು. ಮೂರು ತಿಂಗಳ ಹಿಂದೆಯಷ್ಟೇ ಅದರ ಬಿಲ್ ಪಾವತಿಸಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವಾಗಿದೆ. ಪ್ರತಿವರ್ಷ ಪ್ಯಾಚ್ವರ್ಕ್ಸ್ ನೆಪದಲ್ಲಿ ಜನರ ತೆರಿಗೆ ಪೋಲಾಗುತ್ತಿದೆ.