ಸುಳ್ಯ, ಸ. 14 (DaijiworldNews/HR): ಬೆಳ್ಳಾರೆಯ ಸಾಯಿ ಗಿರಿಧರ್ ಮತ್ತು ಇಂಧನ ಖಾತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಡುವೆ ವಿದ್ಯುತ್ ಸಮಸ್ಯೆ ಬಗ್ಗೆ ಫೋನ್ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿ ಅನೇಕ ಬಾರಿ ಸಮನ್ಸ್ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಸಾಕ್ಷ್ಯ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಜರಾಗದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.
ಡಿ.ಕೆ. ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ನ್ಯಾಯಾಲಯದ ಎದುರು ಹಾಜರುಪಡಿಸಲು ಐಜಿಪಿ ಮತ್ತು ಡಿಐಜಿಗೆ ಕೂಡ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದ್ದು, ಸೆಪ್ಟೆಂಬರ್ 29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಬೆಳ್ಳಾರೆ ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಸಾಯಿ ಗಿರಿಧರ್ ರೈ ಅವರು 2016 ರ ಫೆಬ್ರವರಿ 28 ರಂದು ರಾತ್ರಿ ವಿದ್ಯುತ್ ಸರಬರಾಜು ಸಮಸ್ಯೆಯ ಕುರಿತು ಆಗಿನ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದ್ದರು. ವಿದ್ಯುತ್ ಪೂರೈಕೆಯ ಸಮಸ್ಯೆಗಳ ಬಗ್ಗೆ ಅವರು ವಿವರಿಸಿದ್ದರು. ಸಂಭಾಷಣೆಯ ಸಮಯದಲ್ಲಿಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎಂದು ಹೇಳಲಾಗುತ್ತಿದ್ದು, ಇದರಿಂದ ಕೋಪಗೊಂಡ ಡಿಕೆಶಿ ಸಾಯಿ ಗಿರಿಧರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಆಗಿನ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೂಲಕ ಪೊಲೀಸ್ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅದೇ ರಾತ್ರಿ, ಗಿರಿಧರ್ ರೈ ಅವರನ್ನು ಬಂಧಿಸಿದ್ದರು. ಭಾನುವಾರ ಮಧ್ಯರಾತ್ರಿ ಪೊಲೀಸರು ಗಿರಿಧರ ರೈ ನಿವಾಸವನ್ನು ತಲುಪಿದಾಗ, ರೈ ತನ್ನ ತಾಯಿ, ಪತ್ನಿ ಮತ್ತು ಮಗಳೊಂದಿಗೆ ಇದ್ದರು. ಪೊಲೀಸರ ಕ್ರಮದ ಬಗ್ಗೆ ಒಳಗಿನಿಂದಲೇ ಆಕ್ಷೇಪಿಸಿದ್ದರು. ಬಾಗಿಲು ತೆರೆಯಲಿಲ್ಲ. ಅಷ್ಟಕ್ಕೆ ಬಿಡದ ಪೊಲೀಸರು ಮನೆಯ ಚಾವಣಿ ಹತ್ತಿ, ಹೆಂಚುಗಳನ್ನು ಒಡೆದು ಮನೆಯೊಳಗೆ ಇಳಿದು ರೈ ಅವರನ್ನು ಬಂಧಿಸಿದರು. ಈ ವಿಚಾರ ಅಂದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಸಾಕ್ಷಿಯಾಗಿದ್ದು, ಸಾಕ್ಷ್ಯ ನುಡಿಯಲು ಅವರು ಸುಳ್ಯ ನ್ಯಾಯಾಲಯಕ್ಕೆ ಬಂದಿಲ್ಲ. ಅದಕ್ಕಾಗಿ ಅವರಿಗೆ 3 ಬಾರಿ ಸಮನ್ಸ್ ಮತ್ತು ಒಂದು ಬಾರಿ ವಾರಂಟ್ ಜಾರಿಯಾಗಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇದೀಗ ಬಂದಿರುವ ಹೊಸ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್ ಹಾಜರಾತಿಗಾಗಿ ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.