ಕಾರ್ಕಳ, ಸೆ.13 (DaijiworldNews/PY): ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2021ರ ಸಾಲಿನ ಎರಡು ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ದಿವಂಗತ ಕೆ. ಬಾಲಕೃಷ್ಣ ಆಚಾರ್ಯ ಮತ್ತು ಶ್ರೀಮತಿ ವಾಣಿ ಬಿ.ಆಚಾರ್ಯ ಅವರ ದತ್ತಿನಿಧಿಯಿಂದ ನೀಡಲಾಗುವ ‘ಶ್ರೇಷ್ಠ ಶಿಕ್ಷಕ ಸೌರಭ’ ಪ್ರಶಸ್ತಿಯನ್ನು ನಿವೃತ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜ ಅವರಿಗೆ ಹಾಗೂ ಡಾ.ಯು.ಪಿ.ಉಪಾಧ್ಯಾಯ ದಂಪತಿ ಪ್ರತಿಷ್ಠಾನದಿಂದ ನೀಡಲಾಗುವ ‘ಮಹೋಪಾಧ್ಯಾಯ ಜಾನಪದ ಸಾಹಿತ್ಯ ಪ್ರಶಸ್ತಿ’ಯನ್ನು ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು, ಜಾನಪದ ತಜ್ಞರೂ ಆಗಿರುವ ಡಾ.ಎಸ್.ಆರ್.ಅರುಣ ಕುಮಾರ್ ಅವರಿಗೆ ನೀಡುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ 10,000 ರೂ. ಗಳ ಗೌರವ ಸಂಭಾವನೆ, ತಾಮ್ರ ಪತ್ರ ಮತ್ತು ಸನ್ಮಾನಗಳನ್ನು ಒಳಗೊಂಡಿದ್ದು, ಕರ್ನಾಟಕ ಸರ್ಕಾರದ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರ ಅನುಕೂಲತೆಯ ದಿನದಲ್ಲಿ ಕಾಂತಾವರದಲ್ಲಿ ಪ್ರದಾನಿಸಲಾಗುವುದು. ಈ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.