ಕಾರ್ಕಳ, ಸೆ.12 (DaijiworldNews/PY): "ಲಯನ್ಸ್ ಕ್ಲಬ್ ಹಾಗೂ ರೆಡ್ಕ್ರಾಸ್ ಸಂಸ್ಥೆಗಳು ವಿಶ್ವದಲ್ಲಿಯೇ ಅತೀ ದೊಡ್ಡ ಸೇವಾ ಸಂಸ್ಥೆಗಳೆಂದು ಗುರುತಿಸಲ್ಪಟ್ಟಿದೆ. ಅವುಗಳೆರಡರ ತತ್ವ-ಧ್ಯೇಯೋದ್ಧೇಶಗಳು ಒಂದೇ ತರದಾಗಿದೆ" ಎಂದು ಕಾರ್ಕಳ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಆರ್.ಜೋಶಿ ಹೇಳಿದರು.
ಕಾರ್ಕಳ ಲಯನ್ಸ್ ಕ್ಲಬ್ ಇದರ ನೇತೃತ್ವದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕಾರ್ಕಳ ಕುಂದಾಪುರ ರೆಡ್ಕ್ರಾಸ್ ರಕ್ತನಿಧಿ ಕೇಂದ್ರ ಇದರ ಸಹಯೋಗದೊಂದಿಗೆ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಕಳೆದ ಮೂರು ವರ್ಷಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ 10 ಕಡೆಗಳಲ್ಲಿ ಹಾಗೂ ಇತರ ಸಂಘ ಸಂಸ್ಥೆಯ ಸಹಭಾಗಿತ್ವದಲ್ಲಿ 15 ಕಡೆಗಳಲ್ಲಿ ಒಟ್ಟಾರೆಯಾಗಿ 25 ಶಿಬಿರವನ್ನು ಆಯೋಜಿಸಿದೆ. ಒಬ್ಬ ವ್ಯಕ್ತಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ರಕ್ತ ಪೊರೈಕೆ ಮಾಡುವುದೇ ರೆಡ್ಕ್ರಾಸ್ ಸಂಸ್ಥೆಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಒಬ್ಬ ರಕ್ತದಾನಿ ಒಂದು ಬಾರಿ ರಕ್ತ ದಾನ ಮಾಡಿದರೆ ನಾಲ್ವರ ಜೀವ ಉಳಿಸಲು ಸಾಧ್ಯ" ಎಂದು ತಿಳಿಸಿದರು.
ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, "ಯಾವುದೇ ವಿಜ್ಞಾನಿಗಳಿಂದಲೂ ಸಿದ್ಧಪಡಿಸಲು ಇದುವರೆಗೆ ಸಾಧ್ಯವಾಗದ ರಕ್ತವು ಮಾನವನ ದೇಹದಿಂದಲೇ ಉತ್ಪಾದನೆಯಾಗುವುದು ವಿಶೇಷವಾಗಿದೆ. ಮಾನವೀಯತೆ, ಸಹಬಾಳ್ವೆ, ಸೌಹಾರ್ದತೆ, ಇದ್ದಾಗ ಮಾತ್ರವೇ ಅಗತ್ಯ ರಕ್ತವು ಮತ್ತೊಬ್ಬರಿಂದ ಪಡೆಯಲು ಸಾಧ್ಯ" ಎಂದರು.
ಲಯನ್ಸ್ ಪ್ರಾಂತ್ಯಾಧ್ಯಕ್ಷ ಮಿಥುನ್ ಹೆಗ್ಡೆ, ವಲಯಾಧ್ಯಕ್ಷ ಸುಭಾಸ್ ಸುವರ್ಣ, ಖಜಾಂಚಿ ಪ್ರಕಾಶ್ ಪಿಂಟೋ, ಪ್ರೋ.ಪದ್ಮನಾಭ ಗೌಡ, ಕೆಥೋಲಿಕ್ ಸಭಾದ ಅಧ್ಯಕ್ಷ ನೆವಿಲ್ ಡಿಸಿಲ್ವ, ಲಯನ್ಸ್ ಕ್ಲಬ್ನ ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ರಾವ್, ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ಚಂದ್ರಹಾಸ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ಧನ್ಯವಾದವಿತ್ತರು.