ಬೆಳ್ತಂಗಡಿ, ಸೆ.12 (DaijiworldNews/PY): "ಮುಂದಿನ ಎರಡು ದಶಕಗಳವರೆಗೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಕಾಣುವ ಅಗತ್ಯ ಇಲ್ಲ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ 161ನೇ ಬೂತ್ ಸಮಿತಿಯ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಿದ ನಂತರ ಮಾತನಾಡಿದ ಅವರು, "ರಾಜ್ಯ ಸರ್ಕಾರ, ಸಮಾಜದ ಎಲ್ಲಾ ವರ್ಗದ ಜನರ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಈ ರೀತಿಯ ಕಾರ್ಯಗಳನ್ನು ಬಿಜೆಪಿ ಆಡಳಿತದಲ್ಲಿ ಮಾತ್ರವೇ ಕಾಣಬಹುದು" ಎಂದು ತಿಳಿಸಿದ್ದಾರೆ.
"ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ನಡೆಸಿಕೊಂಡು ಬಂದಿದ್ದ ಕೀಳುಮಟ್ಟದ ರಾಜಕೀಯದಿಂದಾಗಿ ಎಲ್ಲಿಯೂ ಅಭಿವೃದ್ಧಿಯಾಗಿಲ್ಲ. ಹರೀಶ್ ಪೂಂಜ ಅವರು ತಾಲೂಕಿನಲ್ಲಿ ಈಗ ಅಭಿವೃದ್ಧಿಯ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಕೂಡಾ ಇದೇ ಪರಿಸ್ಥಿತಿ ಮುಂದುವರಿದಿದೆ. ಹಾಗಾಗಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುವ ಅಗತ್ಯವಿಲ್ಲ" ಎಂದಿದ್ದಾರೆ.