ಬಂಟ್ವಾಳ, ಸ.11 (DaijiworldNews/HR): ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ.
ಬಂಟ್ವಾಳ ನರಿಕೊಂಬು ಗ್ರಾಮದ ಗ್ರಾ.ಪಂ.ಸದಸ್ಯ ಪ್ರಕಾಶ್ ಕೋಡಿಮಜಲು ಎಂಬವರ ಪುತ್ರ ಯಜ್ಞೇಶ್ (21) ಎಂಬಾತನ ಶವ ಪತ್ತೆಯಾಗಿದೆ.
ಸೆ.8 ರಿಂದ ಯಜ್ಞೇಶ್ ಕಾಣೆಯಾಗಿದ್ದಾನೆ ಎಂದು ಈತನ ತಂದೆ ಪ್ರಕಾಶ್ ಕೋಡಿಮಜಲು ಇಂದು ಸೆ.11 ರಂದು ಬೆಳಿಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಮಧ್ಯಾಹ್ನದ ವೇಳೆ ಮಂಗಳೂರು ಸಮೀಪದ ಅಡ್ಯಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಈತನ ಶವ ಪತ್ತೆಯಾಗಿದೆ.
ಡಿಪ್ಲೋಮ ಇಂಜಿನಿಯರಿಂಗ್ ಪದವಿದರ ಯಜ್ಞೇಶ್ ಬಿಸಿರೋಡಿನ ಕುಶನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಈತ ವಿದ್ಯಾಭ್ಯಾಸ ಮಾಡಿದ ಬಳಿಕ ಸರಿಯಾದ ಕೆಲಸ ಸಿಕ್ಕಿಲ್ಲ ಎಂಬ ಬೇಸರದಿಂದ ಇದ್ದ ಎಂಬ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಈತನ ಸಾವಿಗೆ ಕಾರಣವೇನು ಎಂಬುದು ತನಿಖೆಯ ಬಳಿಕ ತಿಳಿಯಬೇಕಾಗಿದೆ.
ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ? ಅಥವಾ ಸಾವು ಯಾವ ರೀತಿ ನಡೆದಿದೆ ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ಪೋಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ.