ಕಾಸರಗೋಡು, ಸ.11 (DaijiworldNews/HR): ಬಡ ವಿದ್ಯಾರ್ಥಿಗಳ ಮೊಬೈಲ್ ಫೋನ್ಗಗಳನ್ನು ಕಳವು ಗೈದು ಮಂಗಳೂರಿನಲ್ಲಿ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪೆರಿಯ ಅಯಂಪಾರದ ಹಬೀಬ್ ರಹಮಾನ್ (27) ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗೆ ನೀಡಲು ಚೆರ್ಕಳ ಹಯರ್ ಸೆಕಂಡರಿ ಶಾಲೆಯಲ್ಲಿ ಇಡಲಾಗಿದ್ದ ಮೊಬೈಲ್ ಫೋನ್ಗಳನ್ನು ಹಾಗೂ 1,700 ರೂ. ನಗದನ್ನು ಕಳವು ಮಾಡಲಾಗಿತ್ತು.
ಜುಲೈ ಕೊನೆಯಲ್ಲಿ ಕಳವು ನಡೆದಿತ್ತು. ಬಡ ವಿದ್ಯಾರ್ಥಿಗಳಿಗಾಗಿ ನೀಡಲು ಶಾಲೆಯ ಹಳೆ ವಿದ್ಯಾರ್ಥಿಗಳು ನೀಡಲಾಗಿದ್ದ ಏಳು ಮೊಬೈಲ್ ಫೋನ್ಗಳನ್ನು ಹಾಗೂ 1700 ರೂ.ಗಳನ್ನು ಶಾಲಾ ಕಚೇರಿಯ ಬೀಗ ಮುರಿದು ಕಳವು ಮಾಡಲಾಗಿತ್ತು.
ಈ ಕುರಿತು ಶಾಲಾ ಸಹಾಯಕ ಮುಖ್ಯಸ್ಥ ಪಿ.ಎ ಸಮೀರ್ ವಿದ್ಯಾನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವು ಗೈಯ್ಯಲಾಗಿದ್ದ ಮೊಬೈಲ್ಗಳ ಐಎಂಇಐ ನಂಬ್ರ ಕೇಂದ್ರೀಕರಿಸಿ ತನಿಖೆ ನಡೆಸಿದ್ದು, ಕಳವು ಗೈದ ಒಂದು ಮೊಬೈಲ್ ಮಂಗಳೂರಿನ ವ್ಯಕ್ತಿಯೋರ್ವರು ಬಳಸುತ್ತಿರುವುದು ಪತ್ತೆಯಾಗಿದೆ.
ಮೊಬೈಲ್ ಬಳಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಯಿತು ಪೊಲೀಸರು ವಿಚಾರಣೆ ನಡೆಸಿದಾಗ ಮಂಗಳೂರಿನ ಮೊಬೈಲ್ ಮಳಿಗೆಯೊಂದರಿಂದ ಖರೀದಿಸಿದ್ದಾಗಿ ತಿಳಿದುಬಂತು. ಬಳಿಕ ಈ ಮಳಿಗೆ ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಹಬೀಬ್ ರಹಮಾನ್ನ ಮಾಹಿತಿ ಲಭಿಸಿದ್ದು, ಬಳಿಕ ಈತನನ್ನು ಬಂಧಿಸಲಾಯಿತು.
ಈತನ ವಿರುದ್ಧ ಎರ್ನಾಕುಲಂ, ಪಾಲಕ್ಕಾಡ್ ಜಿಲ್ಲೆಗಳಲ್ಲೂ ಕಳವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು ಗೈದ ಏಳು ಮೊಬೈಲ್ ಗಳಲ್ಲಿ ಐದನ್ನು ಮಂಗಳೂರಿನ ವಿವಿಧೆಡೆಗಳಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.