ಕುಂದಾಪುರ, ಸೆ. 10 (DaijiworldNews/SM): ಕಾಂಗ್ರೆಸ್ ನಾಯಕರು ಇತ್ತೀಚಿನ ದಿನಗಳಲ್ಲಿ ಸೋಲಿನ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್ ಸೋತಾಗ ಇವಿಎಂ ದೋಷ ಹಾಗೂ ಬಿಜೆಪಿಯಿಂದ ಅಧಿಕಾರ ದುರುಪಯೋಗ ಆಗಿದೆ ಎನ್ನುವ ಎರಡು ಆರೋಪ ಮಾಡುತ್ತಾ ಬಂದಿದೆ ಎಂದು ಶೃಂಗೇರಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಹೇಳಿದ್ದಾರೆ.
ತಾಲ್ಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಸೆ.10ರಂದು ಗಣೇಶ ಚತುರ್ಥಿ ಹಿನ್ನೆಲೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು. ಒಂದೊಮ್ಮೆ ಬಿಜೆಪಿ ಸೋತರೆ ಇವಿಎಂ ದೋಷವಿರಲ್ಲ, ಅಧಿಕಾರವೂ ದುರುಪಯೋಗ ಆಗಲ್ಲ. ಇದನ್ನೆಲ್ಲಾ ಗಮನಿಸಿದರೆ ಕಾಂಗ್ರೆಸಿಗರ ಮಾನಸಿಕ ಸ್ಥಿತಿ ಸರಿಯಿಲ್ಲ. ಇದರಿಂದ ಹೊರಬಂದು ಅವರ ಪಕ್ಷದೊಳಗಿನ ಸಮಸ್ಯೆ ಅರಿತುಕೊಳ್ಳದಿದ್ದರೆ ದೇಶದೊಳಗಡೆ ಅವರು ಸೊನ್ನೆಯಾಗುತ್ತಾರೆ. ಅಧಿಕಾರ ದುರಪಯೋಗವೆನ್ನುವುದು ಕೇವಲ ಅವರ ಹೇಳಿಕೆಗೆ ಸೀಮಿತ. ಸರಕಾರದ ಜನಪರ ಕೆಲಸ, ಕೇಂದ್ರ ಹಾಗೂ ರಾಜ್ಯ ನಾಯಕರ ನಾಯಕತ್ವ ನೋಡಿ ಜನರು ಮತ ಹಾಕುತ್ತಿದ್ದಾರೆ. ಇವಿಎಂ, ಅಧಿಕಾರ ದುರುಪಯೋಗ ಎನ್ನುವ ಎರಡು ಸುಳ್ಳು ವಿಚಾರ ಹೇಳುವುದನ್ನು ಬಿಡದಿದ್ದರೆ ಕಾಂಗ್ರೆಸ್ ಜೀವನದಲ್ಲಿ ಗೆಲ್ಲೋದಿಲ್ಲ ಎಂದು ಡಿ.ಎನ್ ಜೀವರಾಜ್ ಹೇಳಿದ್ದಾರೆ.
ಎಲ್ಲರಿಗೂ ವ್ಯಾಕ್ಸಿನೇಷನ್ ಆಗುವ ತನಕ ಕೊರೋನಾ ನಿಯಂತ್ರಣದ ಸಲುವಾಗಿ ಕೆಲ ನಿರ್ದಿಷ್ಟ ಪ್ರದೇಶದಲ್ಲಿ ಸರಕಾರ ಸಮಯೋಚಿತವಾದ ನಿರ್ಬಂಧಗಳನ್ನು ಹೇರಿದೆ. ಹಬ್ಬಗಳನ್ನು ಆಚರಿಸುವುದರ ಜೊತೆ ಆರೋಗ್ಯ ಕಾಳಜಿ ಬಹುಮುಖ್ಯ. ದೇಶದ ಅರ್ಧದಷ್ಟು ಕೊರೋನಾ ಪ್ರಕರಣ ಕೇರಳ ರಾಜ್ಯದಲ್ಲಿದೆ. ಮಹಾರಾಷ್ಟ್ರ, ಕೇರಳದಲ್ಲಿ ಪ್ರಕರಣ ಉಲ್ಭಣಗೊಂಡಾಗ ಕರ್ನಾಟಕದಲ್ಲೂ ಪಾಸಿಟಿವಿಟಿ ಹೆಚ್ಚುತ್ತಿದೆ. ಸರಕಾರ ಹೇಳಿದೆಯೆಂದು ಯಾರೂ ಪಥ್ಯ ಪಾಲನೆ ಮಾಡಬೇಕೆಂದಲ್ಲ. ಬದಲಾಗಿ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.
ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಹೇಳಿದ್ದು ಆ ಕ್ರಮ ನಡೆಯುತ್ತದೆ ಎಂದರು. ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷ ಎರಡೂ ಒಂದೆ. ಪಕ್ಷ ಸಂಘಟನೆ ಹಿನ್ನೆಲೆ ಬಿ.ಎಸ್ ಯಡಿಯೂರಪ್ಪ, ನಳೀನ್ ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಪಕ್ಷದ ಯಾರೊಬ್ಬ ನಾಯಕ ಪ್ರವಾಸಕೈಗೊಂಡರೂ ಅದು ತಪ್ಪಲ್ಲ ಎಂದಿದ್ದಾರೆ.