ಉಡುಪಿ, ಸೆ. 10 (DaijiworldNews/PY): ಅಕ್ರಮವಾಗಿ ಮತಾಂತರ ಮಾಡುತ್ತಿದ್ದಾರೆ ಎನ್ನುವ ಆರೋಪ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮತಾಂತರ ಕೇಂದ್ರದ ಮೇಲೆ ದಾಳಿ ನಡೆಸಿದ ಘಟನೆ ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆ ಆನಂದಿ ಮೈದಾನದಲ್ಲಿ ನಡೆದಿದೆ.
ಕಳೆದ ಹತ್ತು ವರ್ಷಗಳಿಂದ ಬೆನಡಿಕ್ಟ್ ಎಂಬವರ ನೇತೃತ್ವದಲ್ಲಿ ಮತಾಂತರ ಕೆಲಸದಲ್ಲಿ ಪ್ರಾರ್ಥನಾ ಕೇಂದ್ರ ನಿರತವಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆರೋಪಿಸಿದ್ದು, ಶುಕ್ರವಾರ 60ಕ್ಕೂ ಅಧಿಕ ಮಹಿಳೆಯರನ್ನು ಹತ್ತು ಮಕ್ಕಳನ್ನು ಸೇರಿಸಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಪ್ರಾರ್ಥನಾಲಯಕ್ಕೆ ಯಾವುದೇ ಅನುಮತಿ ಇಲ್ಲ ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದು ದಾಳಿಯಿಂದಾಗಿ ಸ್ಥಳದಲ್ಲಿ ಸ್ವಲ್ಪ ಸಮಯ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.
ದಾಳಿಯ ಬಗ್ಗೆ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ, "ಉಡುಪಿಯಲ್ಲಿ ಹಲವಾರು ವರ್ಷಗಳಿಂದ ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ. ಇದರ ವಿರುದ್ದ ಮೊದಲಿನಿಂದಲೂ ಹಿಂದೂ ಜಾಗರಣ ವೇದಿಕೆ ಪ್ರತಿಭಟಿಸುತ್ತಿದೆ. ಈ ಬಗ್ಗೆ ನಮಗೆ ಸೂಕ್ತವಾದ ಮಾಹಿತಿ ಇದ್ದ ಕಾರಣ ಈಗ ದಾಳಿ ಮಾಡಿದ್ದೇವೆ. ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ಅವಕಾಶ ಕೊಟ್ಟಿಲ್ಲ. ಆದರೆ, ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರಕ್ಕೆ ಅವಕಾಶ ಇದೆ. ಮತಾಂತರಿಗಳಿಗೆ ಕೊರೊನಾ ಮಾರ್ಗಸೂಚಿ ಅನ್ವಯವಾಗುವುದಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ಕರಾವಳಿ ಜಿಲ್ಲೆಗಳಲ್ಲಿ ಹಲವು ಮತಾಂತರ ಕೇಂದ್ರಗಳಿವೆ. ಈ ಬಗ್ಗೆ ಪೊಲೀಸರು ಸೂಕ್ತವಾದ ಕ್ರಮ ಕೈಗೊಳ್ಳದೇ ಇದ್ದಲ್ಲಿ ನಾವು ನಮ್ಮ ದಾಳಿಯನ್ನು ಮುಂದುವರಿಸುತ್ತೇವೆ" ಎಂದಿದ್ದಾರೆ.
"ಇಲ್ಲಿ ನಾವು ಯಾವುದೇ ಮತಾಂತರ ಮಾಡುತ್ತಿಲ್ಲ. ನಾವು ಪ್ರಾರ್ಥನೆ ಮಾತ್ರ ಮಾಡುತ್ತಿದ್ದೇವೆ" ಎಂದು ಕಾರ್ಕಳದ ಮತಾಂತರ ಕೇಂದ್ರದ ಮುಖ್ಯಸ್ಥ ಬೆನೆಡಿಕ್ಟ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
"ಇದು ಮಂಗಳೂರಿನ ಕ್ರೈಸ್ತ ಸಂಸ್ಥೆ ನಡೆಸುತ್ತಿರುವ ಕೇಂದ್ರ. ನಾವು ಯಾರನ್ನೂ ಮತಾಂತರ ಮಾಡುವುದಿಲ್ಲ. ಅನ್ಯ ಧರ್ಮದವರು ಕೆಲವರು ಪ್ರಾರ್ಥನೆಗಾಗಿ ಬರುತ್ತಾರೆ. ಇವತ್ತು ಪ್ರಾರ್ಥನೆ ನಡೆಸುತ್ತಿರುವಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಏಕಾಏಕಿ ನುಗ್ಗಿ ಗಲಾಟೆ ಮಾಡಿದ್ದಾರೆ. ವಿಡಿಯೋ ತೆಗೆದಿದ್ದಾರೆ. ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮತಾಂತರ ಮಾಡುವುದು ನಮ್ಮ ಕೆಲಸ ಅಲ್ಲ. ನಾವು ಕೇವಲ ಪ್ರಾರ್ಥನೆ ಮಾತ್ರ ಮಾಡುತ್ತಿದ್ದೆವು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.