ಉಡುಪಿ, ಸೆ. 10 (DaijiworldNews/PY): ಉಡುಪಿ ಜಿಲ್ಲೆಯಲ್ಲಿ ಶನಿವಾರ, ಭಾನುವಾರದ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಶುಕ್ರವಾರ ಆದೇಶ ನೀಡಿದ್ದಾರೆ.
"ವಾರಾಂತ್ಯ ಕಫ್ರ್ಯೂ ರದ್ದುಗೊಂಡರೂ ಕೂಡಾ ನೈಟ್ ಕರ್ಫ್ಯೂ ಎಂದಿನಂತೆ ಮುಂದುವರಿಯಲಿದೆ. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ" ಎಂದು ತಿಳಿಸಿದ್ದಾರೆ.
"ಕೇರಳದಿಂದ ಕರ್ನಾಟಕ್ಕೆ ಹಾಗೂ ಕರ್ನಾಟಕದಿಂದ ಕೇರಳಕ್ಕೆ ಪ್ರಯಾಣಿಸುವವರು ಹಾಗೂ ವಿದ್ಯಾರ್ಥಿಗಳು ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಬೇಕು" ಎಂದು ಮಾಹಿತಿ ನೀಡಿದ್ದಾರೆ.
"ಜಿಲ್ಲೆಯಲ್ಲಿ ಪಬ್ಗಳಿಗೆ ಅನುಮತಿ ಇಲ್ಲ. ಹೆಚ್ಚಿನ ಜನ ಸೇರುವ ಎಲ್ಲಾ ಸಾಮಾಜಿಕ, ಧಾರ್ಮಿಕಗಳಿಗೆ ಸಂಪೂರ್ಣವಾದ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ಶೇ. 100 ರಷ್ಟು ಆಸನ ಸಾಮರ್ಥ್ಯದೊಂದಿಗೆ ಪ್ರಯಾಣಕ್ಕೆ ಅವಕಾಶವಿದೆ. ವಿವಾಹಕ್ಕೆ ತಹಶೀಲ್ದಾರ್ ಅನುಮತಿ ಕಡ್ಡಾಯ. ಮದುವೆಗೆ ಗರಿಷ್ಟ 400 ಮಂದಿಗೆ ಮಾತ್ರವೇ ಭಾಗವಹಿಸಲು ಅವಕಾಶ. ದೇವಾಲಯ ಚರ್ಚ್, ಮಸೀದಿಗಳಿಗೆ ಅವಕಾಶ, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳಲ್ಲಿ ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಅನುಮತಿ ನೀಡಲಾಗಿದೆ" ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
"ಉಡುಪಿಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು" ಎಂದು ಮನವಿ ಮಾಡಿದ್ದಾರೆ.