ಉಡುಪಿ, ಸೆ. 10 (DaijiworldNews/PY): ಮಲ್ಪೆ ಪರಿಸರದಲ್ಲಿ ಸಮುದ್ರಕ್ಕೆ ಬಿದ್ದು ಅಪಾಯಕ್ಕೊಳಗಾದ ಸಂಧರ್ಭ ತಮ್ಮ ಜೀವದ ಹಂಗು ತೊರೆದು ರಕ್ಷಿಸುವ ಈಶ್ವರ ಮಲ್ಪೆ ಇವರ ಜೀವ ರಕ್ಷಣಾ ಕಾರ್ಯಕ್ಕೆ ಸಹಾಯಕವಾಗುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವರು ಕೊಡಮಾಡಿದ ಆ್ಯಂಬುಲೆನ್ಸ್ ಅನ್ನು ಇಂದು ಕಾಂಗ್ರೆಸ್ ಭವನದಲ್ಲಿ ಈಶ್ವರ್ ಮಲ್ಪೆಯವರಿಗೆ ಹಸ್ತಾಂತರಿಸಲಾಯಿತು.
ಆ್ಯಂಬುಲೆನ್ಸ್ ಹಸ್ತಾಂತರಿಸಿ ಮಾತನಾಡಿದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, "ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕಳೆದ ಬಾರಿ ಮೀನುಗಾರೊಂದಿಗೆ ಮಲ್ಪೆ ಬಂದರಿನಲ್ಲಿ ನಡೆಸಿದ ಸಂವಾದದ ಸಂಧರ್ಭದಲ್ಲಿ ಈಶ್ವರ್ ಮಲ್ಪೆಯವರ ಜೀವ ರಕ್ಷಕ ಕಾರ್ಯದಲ್ಲಿ ಒಂದು ಆ್ಯಂಬುಲೆನ್ಸ್ ಅಗತ್ಯತೆ ಇರುವುದನ್ನು ಡಿ.ಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದರು. ಈಶ್ವರ್ ಅವರು ನಿಸ್ವಾರ್ಥವಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ತಾನು ಬಡವನಾದರೂ ಇನ್ನೊಬ್ಬರಿಗೆ ಸಹಾಯ ಮಾಡುತಿದ್ದಾರೆ. ಮಲ್ಪೆಯಲ್ಲಿ 7 ಸಾವಿರ ದೋಣಿಗಳಿದ್ದು ಇಲ್ಲಿ ಅವಘಡಗಳು ಆಗ್ಗಾಗೆ ಸಂಭವಿಸುತ್ತಿರುತ್ತವೆ. ನಾನು ಸಚಿವನಾಗಿದ್ದಾಗ ಮಲ್ಪೆಗೆ ಒಂದು ಶಾಶ್ವತ ಆ್ಯಂಬುಲೆನ್ಸ್ನ ವ್ಯವಸ್ಥೆ ಮಾಡಿದ್ದೆ. ಈ ಆ್ಯಂಬುಲೆನ್ಸ್ ಉಪಯೋಗಕ್ಕೆ ಬರಬಾರದು ಎಂಬುವುದು ನನ್ನ ಒಂದು ಕೋರಿಕೆ. ಯಾವುದೇ ಸಾವು ನೋವು ಆಗಬಾರದು ಎಂಬುವುದು ನನ್ನ ಆಶಯ. ಕಾಂಗ್ರೆಸ್ ಪಕ್ಷದ ಋಣ ಎಲ್ಲರ ಮೇಲೆ ಇದೆ. ಅದರಲ್ಲಿ ಪಕ್ಷದ ಚಿಹ್ನೆ ಇದೆ ಎಂಬ ಕಾರಣಕ್ಕಾಗಿ ಅದಕ್ಕೆ ಅಗೌರವ ತೋರಿಸಬಾರದು. ಈ ಆ್ಯಂಬುಲೆನ್ಸ್ನ ಮೇಲುಸ್ತುವಾರಿಯನ್ನು ಮೀನುಗಾರರ ಸಂಘವೇ ಮಾಡಲಿದೆ" ಎಂದರು.
ಈಶ್ವರ್ ಮಲ್ಪೆ ಅವರು ತಮ್ಮ ಬಡತನವನ್ನು ಮೀರಿ ಮಲ್ಪೆ ಭಾಗದಲ್ಲಿ ಸಮುದ್ರಕ್ಕೆ ಆಯತಪ್ಪಿ ಬಿದ್ದು ಅನಾಹುತಗಳಾದ ಸಂದರ್ಭದಲ್ಲಿ ಜೀವರ ರಕ್ಷಕರಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇವರ ಕುರಿತಾಗಿ ಈಗಾಗಲೇ ದಾಯ್ಜಿವಲ್ಡ್ ವಾಹಿನಿಯು ಇತ್ತೀಚೆಗಷ್ಟೇ ಒಂದು ವಿಶೇಷ ಸಂದರ್ಶನವನ್ನು ನಡೆಸಿ ಅವರ ವೈಯುಕ್ತಿಕ ಜೀವನ ಮತ್ತು ಅವರ ಜೀವ ರಕ್ಷಣಾ ಕಾರ್ಯಗಳ ಕುರಿತು ಬೆಳಕು ಚೆಲ್ಲಿತ್ತು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ್ಯ ಸತೀಶ್ ಅಮಿನ್ ಪಡುಕೆರೆ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.