ಬೆಳ್ತಂಗಡಿ, ಸ.10 (DaijiworldNews/HR): ಗಣಪನಿಗೆ ಹಲವು ನಾಮಗಳು ಇರುವಂತೆ, ಕಲಾವಿದರು ತಮ್ಮ ಕೈಚಳಕದ ಮೂಲಕ ಹಲವು ವೈವಿಧ್ಯದಲ್ಲಿ, ಹೊಸ ಹೊಸ ಪ್ರಯತ್ನದ ಮೂಲಕ ಗಣಪನ ವಿಗ್ರಹ ಹಾಗೂ ಚಿತ್ರಗಳ ಮೂಲಕ ತಮ್ಮ ಕೈಚಳಕವನ್ನು ಪ್ರದರ್ಶಿಸುತ್ತಾರೆ. ಈ ಬಾರಿ ಕೊರೊನಾ ಮಹಾಮಾರಿಯ ಭಯದ ನಡುವೆಯೂ ಆಚರಿಸಲ್ಪಡುತ್ತಿರುವ ಗಣೇಶ ಚತುರ್ಥಿಗೆ ಬೆಳ್ತಂಗಡಿಯ ಯುವ ಕಲಾವಿದೆಯೊಬ್ಬರು ತಮ್ಮ ವಿಶಿಷ್ಟ ಕಲ್ಪನೆಯ ಮೂಲಕ ಬಿಡಿಸಿರುವ ಚುಕ್ಕಿ ಗಣಪ ಸದ್ದು ಮಾಡುತ್ತಿದೆ.
ನಾಡಿನೆಲ್ಲೆಡೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಆಡಂಬರವಿಲ್ಲದಿದ್ದರೂ ಕೂಡಾ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಟ್ಟು ಪಾಡುಗಳೊಂದಿಗೆ ಅತ್ಯಂತ ಸಂಭ್ರಮದಿಂದ ಚೌತಿ ಹಬ್ಬವು ನಡೆಯುತ್ತಿದೆ. ಮನೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಣಪನ ಮೂರ್ತಿಯಿಟ್ಟು ಪೂಜಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯೆಂದರೆ ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವದಿಂದ ನಡೆಯುವಂತಹ ಹಬ್ಬಗಳಲ್ಲಿ ಒಂದು. ಆದರೆ, ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳ ಆಚರಣೆಯ ಮೊರೆ ಹೋಗಲಾಗಿದೆ. ಆದರೂ, ಸಮಸ್ತ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಮಡುಗಟ್ಟಿದೆ. ಈ ಮಧ್ಯೆ, ಕಲಾವಿದರೂ ಕೂಡಾ ಮೊದಲ ಪೂಜಿಪ ಗಣಪನಿಗೆ ತಮ್ಮ ಕೈಚಳಕದ ಮೂಲಕ ಭಕ್ತಿ ಅರ್ಪಿಸಿದ್ದಾರೆ. ಅಂತಹ ಕಲಾವಿದರಲ್ಲಿ ಬೆಳ್ತಂಗಡಿ ತಾಲೂಕಿನ ಸುರಕ್ಷಾ ಆಚಾರ್ಯ ಕೂಡಾ ಒಬ್ಬರು.
ಸುಮಾರು 8 ಸಾವಿರ ಚುಕ್ಕಿಗಳನ್ನು ಬಳಸಿಕೊಂಡು ಮಂಡಲ ರಚಿಸಿ, ಆ ಮಂಡಲದ ಮಧ್ಯದಲ್ಲಿ ವಿಘ್ನನಿವಾರಕನ ಚಿತ್ರವು ಕಲಾಭಿಮಾನಿಗಳ ಮನಸೂರೆಗೊಳ್ಳುತ್ತಿದೆ. ಹೌದು, ಕೊರೊನಾ ಲಾಕ್ ಡೌನ್ ಸಮಯದಲ್ಲಿ ತನ್ನ ವಿಭಿನ್ನ ಚಿಂತನೆಯ ಮೂಲಕ ಡಾಟ್ ಮಂಡಲ್ ಆರ್ಟ್ ಆರಂಭಿಸಿದ ಸುರಕ್ಷಾ ಅದರಲ್ಲೇ ಮಗ್ನಳಾಗಿದ್ದಾಳೆ. 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವಕ್ಕೂ ತ್ರಿವರ್ಣ ಬಣ್ಣದ ಡಾಟ್ ಮಂಡಲ್ ಸೇರಿದಂತೆ ಹಲವಾರು ಡಾಟ್ ಮಂಡಲ್ ಈಕೆಯ ಕೈಚಳಕದಲ್ಲಿ ಅರಳಿದೆ. ಸುರಕ್ಷಾಳ ಕೈಯ್ಯಲ್ಲಿ ಅರಳಿದ ವಿಭಿನ್ನವಾದಂತಹ, ಸುಂದರ ಡಾಟ್ ಮಂಡಲ್ ಗಳಿಗೆ ಬೇಡಿಕೆಯೂ ಇದೆ. ಇದೀಗ, ಗಣೇಶ ಚತುರ್ಥಿಯ ದಿನದಂದು ಗಣಪನ ಡಾಟ್ ಮಂಡಲ್ ಆರ್ಟ್ ಕಲಾಭಿಮಾನಿಗಳ ಮನಸ್ಸು ಗೆದ್ದಿದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸುರಕ್ಷಾ ಆಚಾರ್ಯ ಬೆಳ್ತಂಗಡಿ ತಾಲೂಕಿನ ಕನ್ನಾಜೆ ಲಾಯಿಲದ ಚಂದ್ರಶೇಖರ ಆಚಾರ್ಯ ಹಾಗೂ ಸರಸ್ವತಿ ಆಚಾರ್ಯರ ಮಗಳು. ಬಿ.ಕಾಂ. ಪದವೀಧರೆಯಾಗಿರುವ ಸುರಕ್ಷಾ ತನ್ನ ಆಸಕ್ತಿಯ ಮೂಲಕವೇ ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಯಕ್ಷಗಾನ ಕಲಾವಿಧೆಯಾಗಿರುವ ಈಕೆ, ಗಾಯಕಿಯೂ ಹೌದು. ಡಾಟ್ ಮಂಡಲ್ ಆರ್ಟ್ ಮಾತ್ರವಲ್ಲದೆ, ಲೀಫ್ ಆರ್ಟ್, ಪೆನ್ಸಿಲ್ ಆರ್ಟ್, ವಾಲ್ ಆರ್ಟ್ ಹೀಗೆ ನಾನಾ ಬಗೆಯ ಚಿತ್ರಕಲೆಗಳು ಈಕೆಯ ಕೈಚಳಕದಲ್ಲಿ ಅರಳಿವೆ.