ಕಾರ್ಕಳ, ಸೆ. 10 (DaijiworldNews/PY): ಕರ್ನಾಟಕ ಸರಕಾರದ ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರು ಕಾರ್ಕಳ ಪುರಸಭೆ ಪ್ರಥಮ ಬಾರಿಗೆ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮನವಿ ಪತ್ರ ಸಲ್ಲಿಸಿದ್ದರು.
ಪ್ರಾಧಿಕಾರದ ಸಮಸ್ಯೆಯಿಂದ ಮನೆ ಕಟ್ಟುವವರ ಕನಸು ಭಗ್ನಗೊಂಡಿದೆ. ಒಳಚರಂಡಿಯ ಕಳಪೆ ಕಾಮಗಾರಿಯಿಂದಾಗಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮೆಸ್ಕಾಂಗೆ ಹಣ ಪಾವತಿಸದ ಕಾರಣ ದಾರಿ ದೀಪಗಳು ಅಳವಡಿಸಲು ಅವಕಾಶವಿಲ್ಲವಾಗಿದೆ. ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕ ಕೆಲಸಗಳಲ್ಲಿ ವಿಳಂಬವಾಗುತ್ತಿದೆ. ಪುರಸಭೆಯ ಒಟ್ಟು ಅಭಿವೃದ್ಧಿಗೆ ತುರ್ತು ಅನುದಾನದ ಅಗತ್ಯವಿದೆ. ಈ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪುರಸಭಾ ವಿಪಕ್ಷ ನಾಯಕ ಆಶ್ಫಕ್ ಅಹ್ಮದ್, ಸದಸ್ಯರಾದ ಶುಭದರಾವ್, ವಿನ್ನಿಬೋಲ್ಡ್ ಮೆಂಡೋನ್ಸಾ, ರೆಹಮತ್ ಶೇಖ್, ಪ್ರತಿಮಾ ರಾಣೆ, ಪ್ರಭಾ ಕಿಶೋರ್, ಸೋಮನಾಥ ನಾಯ್ಕ್ ಉಪಸ್ಥಿತರಿದ್ದರು.