ಕಾರ್ಕಳ, ಸ.10 (DaijiworldNews/HR): ಕನ್ನಡ ಬಾಷೆ, ಸಂಸ್ಕೃತಿ, ಸಂಸ್ಕಾರ, ಕಲೆ, ಸಾಹಿತ್ಯ, ಜಯಕರ ಘೋಷಣೆಯೊಂದಿಗೆ ಪತ್ರಿಕೆ, ಪುಸ್ತಕಗಳ ಓದುವ ಹವ್ಯಾಸವನ್ನು ಬೆಳೆಸಬೇಕು. ತನ್ಮೂಲಕ ಕನ್ನಡವನ್ನು ಉಳಿಸಿ ಮೆರೆಸುವ ಕಾರ್ಯವು ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕಾಗಿದೆ. ಆಗ ಮಾತ್ರ ವಿಶ್ವ ಕನ್ನಡ ಭಾಷೆ ಇನ್ನಷ್ಟು ಕಂಪು ಬೀರಲು ಸಾಧ್ಯವೆಂದು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ವಿಕಾಸ ಜನ ಸೇವಾ ಕಚೇರಿಯಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಪುಸ್ತಕಗಳ ಹಸ್ತಾಂತರ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, "ಪ್ರತಿದಿನ ಕನ್ನಡ ಪತ್ರಿಕೆಯನ್ನು, ತಿಂಗಳಿಗೆ ಕನ್ನಡ ಚಲನ ಚಿತ್ರವನ್ನು ಹಾಗೂ ಸಾಹಿತ್ಯ ಪುಸ್ತಕ ಓದುವ ರೂಢಿಯನ್ನು ಮೈಗೂಡಿಸಬೇಕು. ಕನ್ನಡ ಸಂಸ್ಕೃತಿ ಇಲಾಖೆಗೆ ಹೊಸ ಸ್ವರ್ಶವನ್ನು ನೀಡುವ ಯೋಚನೆ ಮತ್ತು ಯೋಜನೆ ಇದೆ. ಎಲ್ಲಾ ಜಿಲ್ಲೆಯ ಸಾಹಿತಿಗಳನ್ನು ಹಾಗೂ ಸಾಹಿತ್ಯಸಕ್ತರನ್ನು ಗುರುತಿಸಿ ಗೌರವಿಸುವ ಸತ್ಕಾರ್ಯವು ಇದೇ ಇಲಾಖೆಯಿಂದ ನಡೆಯಲಿದೆ. ಆ ಮೂಲಕ ಪ್ರಶಸ್ತಿ ಲಾಬಿಗೆ ತಿಲಾಂಜಲಿ ದೊರಕಲಿದೆ. ಹಿರಿತನದ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಸತ್ಕಾರ್ಯವು ಇಲಾಖೆಯೇ ನಡೆಸಲಿದೆ. ಪ್ರಶಸ್ತಿಯ ಗಾಂಭೀಯತೆ ಮೆರೆಯಬೇಕು. ಕರಾವಳಿ ಜಿಲ್ಲೆಗಳಲ್ಲಿ ಕನ್ನಡ ಬೆಳೆವಣಿಗೆ ಪೂರಕವಾಗಿ ಅದೆಷ್ಟೋ ಸಾಹಿತಿಗಳ ಕೊಡುಗೆ ಅವಿಸ್ಮರಣಿವಾಗಿದೆ. ಅದನ್ನು ನೆನೆಪಿಸಿಕೊಳ್ಳಬೇಕಾಗಿದೆ" ಎಂದರು.
"ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ಕೆ ಹೊಸ ರಂಗು ದೊರಕಲಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಬಲಿದಾನ ಗೈದ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವ ಕಾರ್ಯವು ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಸಕ್ತ ವರ್ಷಾವಧಿಯಲ್ಲಿ ನಡೆಯಲಿದೆ. ಸ್ವಾತಂತ್ರ ಚಳುವಳಿಯಲ್ಲಿ ಕರ್ನಾಟಕದ ಕೊಡುಗೆಯ ಕುರಿತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಮೂಲಕ ಇತಿಹಾಸ ಪುಸ್ತಕ ಹೊರತರಲು ಚಿಂತನೆ ನಡೆಸಲಾಗಿದೆ" ಎಂಬ ಮಾಹಿತಿಯನ್ನು ನೀಡಿದರು.
ಇನ್ನು "ನಿರೀಕ್ಷೆ ಮಟ್ಟಕ್ಕಿಂತ ಮೀರಿ ಅಭಿಮಾನಿಗಳಿಂದ ಬಂದಿರುವ ಪುಸ್ತಕಗಳನ್ನು ಕೇವಲ ಗ್ರಂಥಾಲಯಕ್ಕೆ ಮಾತ್ರ ನೀಡದೇ ಗ್ರಾಮ ಪಂಚಾಯತ್ಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದೇನೆ. ಕಾರ್ಕಳ ಗ್ರಂಥಾಲಯವನ್ನು ಮೇಲ್ದಾರ್ಜೆಗೇರಿಸಿ ಪುಸ್ತಕ ನೀಡಲು ಮುಂದಾಗಿದ್ದೇನೆ. ಆ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಓದಿಗೆ ಅಗತ್ಯ ಇರುವ ಎಲ್ಲಾ ಪುಸ್ತಕಗಳು ಕಾರ್ಕಳ ಗ್ರಂಥಾಲಯದಲ್ಲಿ ಸಿಗುವ ಮೂಲಕ ನವ ಭಾರತ ನಿರ್ಮಾಣ ಕಾರ್ಯವು ನಡೆಯಬೇಕಾಗಿದೆ" ಎಂದರು.
ಕರ್ನಾಟಕ ಸಾಹಿತ್ಯ ಪರಿಷತ್ತಿನ ರಾಜ್ಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, "ಅವಕಾಶ ದೊರೆತಾಗ ಸದುಪಯೋಗ ಪಡಿಸಿಕೊಳ್ಳಬೇಕು. ಪುಸ್ತಕ ಎಂಬುವುದು ಅನುಭವ ಮಂಟಪ. ಓದಿದಾಗ ಹಲವು ಅನುಭವಗಳನ್ನು ಮನದಟ್ಟುಮಾಡಿಕೊಳ್ಳಬಹುದು" ಎಂದಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, "ಓದುವ ಸಾಹಿತ್ಯಕ್ಕೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಪ್ರೋತ್ಸಾಹಿಸುತ್ತಾ ಬಂದಿದೆ. ಶಾಲೆಗಳಿಂದ ಈ ಕಾರ್ಯವು ನಡೆದಿದೆ. ವಿದ್ಯಾರ್ಥಿ ಬದುಕಿನಲ್ಲಿ ಓದುವುದನ್ನು ಅಭ್ಯಸಿಸಿಕೊಳ್ಳಬೇಕು. ಆ ಮೂಲಕ ಅಪಾರ ಭಂಡಾರ ಆ ಪುಸ್ತಕಗಳ ಮೂಲಕ ದೊರಕುತ್ತದೆ" ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕಲ್ಕೂರಾ ಮಾತನಾಡಿ, "ತುಳು ಭಾಷೆ ಮಾತೃಭಾಷೆಯಾಗಿದ್ದರೂ, ಕಾಸರಗೋಡಿನಿಂದ ಬೈಂದೂರು ವರೆಗೆ ಕನ್ನಡ ಭಾಷೆಗೆ ಇಲ್ಲಿನ ಸಾಹಿತ್ಯಾಸಕ್ತ ನೀಡಿದ ಕೊಡುಗೆ ಅಪಾರವಾಗಿದೆ" ಎಂದಿದ್ದಾರೆ.
ಕಾಂತಾವರ ಕನ್ನಡ ಸಂಘದ ಗೌರವಧ್ಯಕ್ಷ ಡಾ.ನಾ.ಮೊಗಸಾಲೆ ಮಾತನಾಡಿ ಇಂಧನ, "ಪುಸಕ್ತ ಎರಡರಿಂದಲೂ ಸಮಾಜಕ್ಕೆ ಬೆಳಕು ಚೆಲ್ಲುತ್ತದೆ. ಈ ಎರಡು ಖಾತೆಗಳು ಇಲ್ಲಿನ ಜನಪ್ರತಿನಿಧಿಗೆ ದೊರಕಿರುವುದು ಈ ಮಣ್ಣಿನ ಸಂಸ್ಕೃತಿಗೆ ದೊರೆತ ರೂಪಕವಾಗಿದೆ. ಪುಷ್ಪ ಸಂಸ್ಕೃತಿ ಎಂದರೆ ಜ್ಞಾನದ ಸಂಕೇತವಾಗಿದೆ. ಅದೇ ಜ್ಞಾನದ ಮತ್ತೊಂದು ರೂಪಕ ಪುಸ್ತಕವಾಗಿದೆ" ಎಂದರು.
ಸಚಿವ ವಿ.ಸುನೀಲ್ಕುಮಾರ್ ಅವರಿಗೆ ಅಭಿಮಾನಿಯೊಬ್ಬರು ಸಾಲಮೇಳದ ಸಂಗ್ರಾಮ ಶೀರ್ಷಿಕೆಯ ಪುಸಕ್ತವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರ ನಾಯಕ ಬಿ.ಜನಾರ್ಧನ ಪೂಜಾರಿಯವರ ಕುರಿತ ಜೀವನ ಚರಿತ್ರೆಯು ಆ ಪುಸ್ತಕದಲ್ಲಿ ಅಡಕವಾಗಿದೆ. ಪುಸಕ್ತವನ್ನು ಸ್ವೀಕರಿಸಿಕೊಂಡ ಸಚಿವ ವಿ.ಸುನೀಲ್ಕುಮಾರ್ ಅವರು ಪ್ರದರ್ಶನಕ್ಕೆ ಇಡುವಂತೆ ಹೇಳಿರುವ ಮೂಲಕ ಗುಣಕ್ಕೆ ಮತ್ಸರ ಇಲ್ಲ ಎಂದು ತೋರುರ್ಪಡಿಸಿದ್ದಾರೆ.