ಮಂಗಳೂರು, ಸ.10 (DaijiworldNews/HR): ಕೊರೊನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾಗಿದ್ದ ವಾರಾಂತ್ಯದ ಕರ್ಫ್ಯೂ ಸಡಲಿಕೆಯಾಗಲಿದೆ. ಈ ವಾರದಿಂದಲೇ ಕ್ರಮ ಜಾರಿಗೊಳಿಸಲಾಗುತ್ತದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತಿದ್ದ ಕೊರೊನಾ ನಿಯಂತ್ರಿಸಲು ಹೇರಲಾಗಿದ್ದ ವಾರಾಂತ್ಯದ ಕರ್ಫ್ಯೂ ಸಡಿಲಗೊಳಿಸುವುದರಿಂದ ಸಾರ್ವಜನಿಕರ ಚಟುವಟಿಕೆಗಳಿಗೆ ಸಹಕಾರವಾಗಲಿದೆ. ಎಲ್ಲಾ ವರ್ಗದ ಜನರಿಗೂ ಸಹಕಾರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ" ಎಂದಿದ್ದಾರೆ.
ಇನ್ನು "ವಾರಾಂತ್ಯದ ಕರ್ಫ್ಯೂ ಸಡಿಸಿದರೂ ಸಾರ್ವಜನಿಕರು ತಮ್ಮ ಆರೋಗ್ಯದ ಸುರಕ್ಷತಾ ದೃಷ್ಟಿಯಿಂದ ಜಾಗರೂಕರಾಗಿರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಆಡಳಿತ ವ್ಯವಸ್ಥೆಯೊಂದಿಗೆ ಕೈ ಜೋಡಿಸಬೇಕು. ನಿಯಮಾವಳಿಗಳ ಸಡಿಲಿಕೆಯಿಂದ ಮೈಮರೆತು ಪುನಃ ಜೀವನವನ್ನು ಸಂಕಷ್ಟಕ್ಕೆ ಒಡ್ಡುವ ಬದಲು ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ಕೋವಿಡ್ ಸೋಂಕು ಉಲ್ಬಣಗೊಳ್ಳದಂತೆ ಜಾಗರೂಕತೆಯಿಂದಿರಬೇಕು" ಎಂದು ಸಾರ್ವಜನಿಕರಲ್ಲಿ ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.