ಉಡುಪಿ, ಸೆ. 09 (DaijiworldNews/SM): ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಕೇರಳಕ್ಕೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ಅಕ್ಟೋಬರ್ ತನಕ ಪ್ರಯಾಣವನ್ನು ಮುಂದೂಡಬೇಕೆಂಬ ಸರಕಾದ ಮನವಿಯಂತೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಕೂಡ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕಕ್ಕೆ ಆಗಮಿಸುವ ಕೇರಳದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಪ್ರಸ್ತುತ ಕೋವಿಡ್ 19 ನೆಗೆಟಿವ್ ಆರ್ ಟಿ ಪಿಸಿಆರ್ ವರದಿಯನ್ನು ಹೊಂದಿದ್ದು, ಆದರೆ ಕರ್ನಾಟಕಕ್ಕೆ ಬಂದ ಮೇಲೆ ಪರಿಶೀಲಿಸಿದಾಗ ಕೋವಿಡ್ 19 ಆರ್ ಟಿ ಪಿಸಿಆರ್ ವರದಿಯು ಪಾಸಿಟಿವ್ ಬರುತ್ತಿದೆ. ಅಂತಹ ಪ್ರಕರಣಗಳ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೆಚ್ಚಾಗುತ್ತಿದ್ದು ಕೋವಿಡ್ -19 ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಕೇರಳದಿಂದ ಆಗಮನಕ್ಕಾಗಿ ಸರಕಾರದಿಂದ ಕಾಲಕಾಲಕ್ಕೆ ಸೂಚನೆಗಳನ್ನು ನೀಡುತ್ತಿದೆ. ಅದರಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಆಡಳಿತಾಧಿಕಾರಿಗಳು/ ನರ್ಸಿಂಗ್ / ಪ್ಯಾರಾಮೆಡಿಕಲ್ನ ಪ್ರಾಂಶುಪಾಲರು ಕೇರಳದಿಂದ ಕರ್ನಾಟಕಕ್ಕೆ ಬರುವ ಮತ್ತು ಕರ್ನಾಟಕದಿಂದ ಕೇರಳಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅಕ್ಟೋಬರ್-2021ರ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಲು ಸೂಚನೆ ನೀಡಬೇಕು ಎಂದು ಉಡುಪಿ ಜಿಲಾಧಿಕಾರಿ ಕೂರ್ಮಾ ರಾವ್ ವಿನಂತಿಸಿದ್ದಾರೆ.
ಅದೇ ರೀತಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕಛೇರಿಗಳು, ಹೋಟೆಲ್ಗಳು, ಕಾರ್ಖಾನೆಗಳು, ಇತ್ಯಾದಿ ಎಲ್ಲಾ ಸಂಸ್ಥೆಗಳ ಮಾಲೀಕರು/ಆಡಳಿತಾಧಿಕಾರಿಗಳು ಕೇರಳದಿಂದ ಕರ್ನಾಟಕಕ್ಕೆ ಬರುವ ಮತ್ತು ಕರ್ನಾಟಕದಿಂದ ಕೇರಳಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅಕ್ಟೋಬರ್-2021 ರ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡಲು ಸೂಚನೆ ನೀಡುವುದು ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ತುರ್ತು ಇಲ್ಲದಿದ್ದರೆ ಕೇರಳಕ್ಕೆ ಭೇಟಿ ನೀಡುವ ಯೋಜನೆಯನ್ನು ಅಕ್ಟೋಬರ್-2021ರ ಅಂತ್ಯದವರೆಗೆ ಮುಂದೂಡಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರು ಉಡುಪಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.