ಮಂಗಳೂರು, ಸೆ. 09 (DaijiworldNews/SM): ಸಾರ್ವಜನಿಕರ ನಿರಂತರ ಆಗ್ರಹದ ಬಳಿಕ ಇದೀಗ ರಾಜ್ಯ ಸರಕಾರ ವಾರಂತ್ಯ ಕರ್ಫ್ಯೂ ರದ್ದುಗೊಳಿಸಿದ್ದು, ದ.ಕ. ಜಿಲ್ಲೆಯಲ್ಲಿದ್ದ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ದೈಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ ಶನಿವಾರ ಹಾಗೂ ರವಿವಾರದಂದು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತು. ಅಲ್ಲದೆ, ಬಹುತೇಕ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ತಡೆಯೊಡ್ಡಲಾಗಿತ್ತು. ಆದರೆ ಇದೀಗ ವಾರಾಂತ್ಯ ಕರ್ಫ್ಯೂ ತೆರವುಗೊಳಿಸಲಾಗಿದೆ. ಎಲ್ಲಾ ವ್ಯಾಪಾರ, ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಇನ್ನು ವ್ಯಾಪಾರಸ್ಥರು, ಮಳಿಗೆ ಸಿಬ್ಬಂದಿಗಳು ವ್ಯಾಕ್ಸಿನ್ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.
ಇನ್ನುಳಿದಂತೆ ನೈಟ್ ಕರ್ಫ್ಯೂ ದ.ಕ. ಜಿಲ್ಲೆಯಲ್ಲಿ ಮುಂದುವರೆದಿದೆ. ಪ್ರತೀ ದಿನ ರಾತ್ರಿ ೯ರಿಂದ ಮುಂಜಾನೆ ೫ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ದೈಜಿವರ್ಲ್ಡ್ ವಾಹಿನಿಗೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸ್ಪಷ್ಟಪಡಿಸಿದ್ದಾರೆ.