ಮಂಗಳೂರು, ಸ.09 (DaijiworldNews/HR): ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಿಸ್ಕಿಟ್, ಬೆಣ್ಣೆ, ಕ್ಯಾಡ್ಬರಿ, ಜೆಮ್ಸ್, ಚಾಕಲೇಟ್, ಚಿಕ್ಕಿ, ಮಸಾಲೆ, ಹೂವು, ಮಣ್ಣಿನ ಹಣತೆಗಳು, ಚಾಕ್, ಪೆನ್ಸಿಲ್, ಪ್ಲಾಸ್ಟಿಕ್ ತಟ್ಟೆ, ಇತ್ಯಾದಿ ವಿವಿಧ ವಸ್ತುಗಳಿಂದ ಗಣೇಶನ ಮೂರ್ತಿ ತಯಾರಿಸುತ್ತಿದ್ದು, ಇವೆಲ್ಲವು ಭಾರತೀಯ ಸಂಸ್ಕೃತಿ ಅಲ್ಲದ ಕಾರಣ ಗಣೇಶನನ್ನು ಪೂಜಿಸುವವರ ಮುಂದೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ.
ಗಣೇಶನ ಮೂರ್ತಿಯನ್ನು ಆವೆ ಮಣ್ಣಿನಿಂದ ಅಥವಾ ಜೇಡಿಮಣ್ಣಿನಿಂದ ತಯಾರಿಸಬೇಕೆಂದು ಧರ್ಮಶಾಸ್ತ್ರದಲ್ಲಿದ್ದು, ಇದನ್ನು ಬಿಟ್ಟು ಇತರ ವಸ್ತುಗಳಿಂದ ಮೂರ್ತಿಗಳನ್ನು ತಯಾರಿಸುವುದು ಧರ್ಮಶಾಸ್ತ್ರದ ವಿರುದ್ಧವಾಗಿದೆ.
ಇನ್ನು ಗಣೇಶ ಎಲ್ಲ ಸಂಪ್ರದಾಯದವರಿಗೆ ಪೂಜನೀಯ. ಪ್ರತಿಯೊಂದು ಸಂಪ್ರದಾಯದಲ್ಲಿ ಗಣೇಶಪೂಜೆ ಇದೆ. ಅನೇಕರ ನಿತ್ಯಪೂಜೆಯಲ್ಲಿಯೂ ಗಣೇಶಮೂರ್ತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ದೇವರ ವಿಡಂಬನೆಯಲ್ಲಿ ಶ್ರೀ ಗಣೇಶನ ವಿಡಂಬನೆ ಅತೀ ಹೆಚ್ಚು ಇರುವುದು ಖೇದಕರ. ಎಲ್ಲರಿಗೂ ಪೂಜನೀಯ ಮತ್ತು ಎಲ್ಲರಿಗಿಂತ ಮೊದಲು ಪೂಜೆಯಾಗುವ ದೇವರನ್ನು ಹೀಗೆ ವಿಕೃತ ರೂಪದಲ್ಲಿ ತೋರಿಸುವುದರಿಂದ ಆ ದೇವರ ಕಡೆಗೆ ನೋಡುವ ಭಕ್ತಿಭಾವ ಹಾಗೂ ವಂದನೀಯ ದೃಷ್ಟಿ ಇಲ್ಲವಾಗುತ್ತದೆ.
ಪ್ರತಿಯೊಂದು ದೇವತೆಯು ಒಂದು ವಿಶಿಷ್ಟ ತತ್ತ್ವ ಆಗಿದೆ. ದೇವತೆಯ ದ್ವಿಮಿತಿಯ-ರೂಪ (ಚಿತ್ರ) ಅಥವಾ ತ್ರಿಮಿತಿಯ ರೂಪ (ಮೂರ್ತಿ) ಇದು ಎಷ್ಟು ಆ ದೇವತೆಯ ಮೂಲ ರೂಪದೊಂದಿಗೆ ಹೋಲಿಕೆಯಾಗುತ್ತದೆಯೋ, ಅಷ್ಟು ಅದರಲ್ಲಿ ಆ ದೇವತೆಯ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತದೆ. ದೇವತೆಯ ತತ್ತ್ವ ಎಷ್ಟು ಹೆಚ್ಚಿರುತ್ತದೆಯೋ, ಅಷ್ಟು ಪೂಜಿಸುವವರಲ್ಲಿ ಭಕ್ತಿಭಾವ ಬೇಗನೆ ಜಾಗೃತವಾಗಲು ಸಹಾಯವಾಗುತ್ತದೆ ಹಾಗೂ ಇಂತಹ ರೂಪದಿಂದ ದೇವತೆಯ ಸ್ಪಂದನ ಹೆಚ್ಚು ಪ್ರಕ್ಷೇಪಣೆಯಾಗುತ್ತಿರುವುದರಿಂದ ವಾತಾವರಣವೂ ಸಾತ್ತ್ವಿಕವಾಗುತ್ತದೆ. ಶಬ್ದ, ಸ್ಪರ್ಷ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಯಾವಾಗಲೂ ಒಟ್ಟಿಗಿರುತ್ತದೆ, ಎಂಬುದು ಅಧ್ಯಾತ್ಮದಲ್ಲಿನ ಒಂದು ಸಿದ್ಧಾಂತವಾಗಿದೆ. ಆದ್ದರಿಂದ ದೇವತೆಯ ರೂಪವಿದ್ದಲ್ಲಿ ಅದರ ಶಕ್ತಿಯೂ ಇರುತ್ತದೆ. ಋಷಿಮುನಿಗಳು ಧರ್ಮಶಾಸ್ತ್ರದಲ್ಲಿ ಪ್ರತಿಯೊಂದು ದೇವತೆಯ ರೂಪದ ವರ್ಣನೆಯನ್ನು ಬರೆದಿಟ್ಟಿದ್ದಾರೆ. ಆದ್ದರಿಂದ ಕಲಾವಿದನು ತನ್ನ ಕಲ್ಪನೆಯಿಂದ ತಯಾರಿಸಿದ ಚಿತ್ರ ಅಥವಾ ಮೂರ್ತಿಗಳಿಗಿಂತ ಧರ್ಮಶಾಸ್ತ್ರದಲ್ಲಿ ಬಣ್ಣಿಸಿದ ಚಿತ್ರ ಅಥವಾ ಮೂರ್ತಿಗಳಲ್ಲಿ ಆಯಾ ದೇವತೆಯ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಧರ್ಮಶಾಸ್ತ್ರದಲ್ಲಿ ಒಂದೇ ದೇವತೆಯ ಅನೇಕ ಹೆಸರುಗಳು ಮತ್ತು ಅದಕ್ಕನುಸಾರ ಇರುವ ರೂಪಗಳ ಉಲ್ಲೇಖವಿದೆ. ಆಗ ಉಪಾಸಕರು ಕಾಲಾನುಸಾರ ದೇವತೆಯ ಯಾವ ರೂಪದ ಉಪಾಸನೆಯನ್ನು ಮಾಡಿದರೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭವಾಗುತ್ತದೆ?, ಎಂಬುದನ್ನು ಕೇವಲ ಅಧ್ಯಾತ್ಮಿಕ ಜ್ಞಾನವಿರುವವರು, ಅಂದರೆ ಸಂತರೆ ಹೇಳಲು ಸಾಧ್ಯ. ಈ ವಿಷಯವನ್ನು ಗಮನಿಸಿ ಧರ್ಮಶಾಸ್ತ್ರಕ್ಕನುಸಾರ ಶ್ರೀ ಗಣೇಶನ ಚಿತ್ರ ಮತ್ತು ಮೂರ್ತಿಗಳನ್ನು ತಯಾರಿಸುವ ಅವಶ್ಯಕತೆಯಿದೆ.
ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ (ಈಶ್ವರ) ನಮ್ಮನ್ನು ರಕ್ಷಿಸುತ್ತದೆ, ದೇವತೆಗಳ ವಿಡಂಬನೆಯನ್ನು ನಿಲ್ಲಿಸಲು ಪ್ರಯತ್ನಿಸಿದರೆ, ನಮ್ಮ ಕಾರ್ಯದಲ್ಲಿ ದೇವತೆಗಳ ಆಶೀರ್ವಾದ ಲಭಿಸಲಿದ್ದು, ಆ ಕಾರ್ಯವು ಆಗುವ ಸಲುವಾಗಿ ದೇವರೆ ನಮಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತಾನೆ.
ಹಾಗಾಗಿ ನಾವು ಭಾರತೀಯ ಸಂಸ್ಕೃತಿಯ ಪ್ರಕಾರ ಮಣ್ಣಿನಿಂದಲೇ ಗಣೇಶನ ಮೂರ್ತಿ ತಯಾರಿಸಿ ಪೂಜಿಸುವುದು ಉತ್ತಮ ಎಂದು ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಅಯ್ದ ವಿಚಾರಗಳನ್ನು ಹಿಂದೂ ಜನಜಾಗೃತಿ ಸಮನ್ವಯಕರಾದ ಸಮಿತಿಯ ಚಂದ್ರ ಮೊಗೇರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.