ಮಂಗಳೂರು, ಸ.09 (DaijiworldNews/HR): ನಗರದ ಕಾಂಪೌಂಡ್ ಗೋಡೆಗಳ ಮೇಲೆ ಉಗ್ರರ ಪರ ಬರಹ ಬರೆದ ಪ್ರಕರಣದ ಮೂವರು ಆರೋಪಿಗಳು ಜಾಮೀನು ಪಡೆದುಕೊಂಡಿದ್ದು, ಅವರನ್ನು ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್, ಬಂಧನದ ಎರಡು ತಿಂಗಳ ನಂತರ ಸೆಷನ್ಸ್ ಕೋರ್ಟ್ ಮೂಲಕ ಜಾಮೀನು ಪಡೆದಿದ್ದ. ನ್ಯಾಯಾಧೀಶರ ಕಸ್ಟಡಿಯಲ್ಲಿ ಮುಂದುವರಿದಿರುವ ತೀರ್ಥಹಳ್ಳಿಯ ಇನ್ನಿಬ್ಬರು ಆರೋಪಿಗಳಾದ ಮಹಮ್ಮದ್ ಶಾರಿಕ್ ಮತ್ತು ಸಾದತ್ ಹುಸೇನ್ ಹೈಕೋರ್ಟ್ ಮೂಲಕ ವಾರದ ಹಿಂದೆ ಜಾಮೀನು ಪಡೆದಿದ್ದಾರೆ.
2020ರ ನ. 27ರಂದು ಬಿಜೈ-ಕದ್ರಿ ಕಂಬಳ ರಸ್ತೆಯ ಅಪಾರ್ಟ್ ಮೆಂಟ್ ಗೋಡೆಯಲ್ಲಿ ಲಷ್ಕರ್ ಜಿಂದಾಬಾದ್, ತಾಲಿಬಾನ್ ಜಿಂದಾಬಾದ್ ಎಂದು ಇಂಗ್ಲೀಷ್ ನಲ್ಲಿ ಬರೆಯಲಾಗಿದ್ದು, ವಿದ್ಯಾರ್ಥಿ ಮಾಝ್ ಮುನೀರ್ ಅಹ್ಮದ್ ಮತ್ತು ಮಹಮ್ಮದ್ ಶಾರೀಕ್ ಗೋಡೆ ಬರಹ ಬರೆದ ಆರೋಪಿಗಳಾಗಿದ್ದು, ಇಬ್ಬರೂ ತೀರ್ಥಹಳ್ಳಿ ಮೂಲದವರಾಗಿದ್ದರು. ಮಾಝ್ ಮುನೀರ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿಕೊಂಡು, ಆರ್ಯ ಸಮಾಜ ರಸ್ತೆಯಲ್ಲಿ ಪ್ಲಾಟೊಂದರಲ್ಲಿ ನೆಲೆಸಿದ್ದನು. ಶಾರೀಕ್ ಈತನ ಗೆಳೆಯನಾಗಿದ್ದು, ಮಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದನು. ವಾರದ ನಂತರ ಇವರಿಬ್ಬರಿಗೂ ಆಶ್ರಯ ಮತ್ತು ಹಣಕಾಸು ನೆರವು ನೀಡಿದ್ದ ಆರೋಪದಲ್ಲಿ ಸಾದತ್ ಹುಸೇನ್ ಎಂಬಾತನನ್ನು ಬಂಧಿಸಲಾಗಿತ್ತು.
ಇನ್ನು ಆರೋಪಿಗಳಿಗೆ ಅರಾಫತ್ ಆಲಿ ಎಂಬಾತ ಉಗ್ರರ ಪರ ಗೋಡೆ ಬರಹಕ್ಕೆ ಪ್ರೇರಣೆ ನೀಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಅರಾಫತ್ ಆಲಿ ಕೂಡಾ ತೀರ್ಥಹಳ್ಳಿ ನಿವಾಸಿಯಾಗಿದ್ದು, ಮೂರು ವರ್ಷದ ಹಿಂದೆಯೇ ಸೌದಿ ಅರೇಬಿಯಾಕ್ಕೆ ತೆರಳಿದ್ದ ಎಂಬ ಮಾಹಿತಿ ಲಭ್ಯವಾಗಿದೆ.