ಉಡುಪಿ, ಸ. 08 (DaijiworldNews/HR): ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ನೀಡುವ ಬಗ್ಗೆ ಸರಕಾರ ಕೇಳಿದ್ದ ಕಾಲಾವಕಾಶ ಸೆ.15ಕ್ಕೆ ಮುಗಿಯಲಿದ್ದು, ಈ ಹಿನ್ನೆಲೆಯಲ್ಲಿ ಅ.1ರವರೆಗೆ ಹಮ್ಮಿಕೊಂಡಿರುವ ಪ್ರತಿಜ್ಞಾ ಪಂಚಾಯತ್ ಅಭಿಯಾನದೊಳಗೆ ಮೀಸಲಾತಿ ನೀಡದಿದ್ದರೆ ಹೋರಾಟವನ್ನು ನಡೆಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಯಾವುದೇ ಲಿಂಗಾಯಿತ ಪೀಠಗಳು ರಾಜ್ಯ ಸರಕಾರದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ನಮ್ಮ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನಗಳು ಕಾಣದ ಕೈಗಳಿಂದ ನಡೆಯುತ್ತಿದೆ. ಆದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಲಿಂಗಾಯುತರೇ ಆಗಬೇಕೆಂಬುದರ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಉಳಿದಂತೆ ಶೇ.90ರಷ್ಟು ಸ್ವಾಮೀಜಿಗಳು ಹೇಳಿಕೆ ನೀಡಿದೆ, ನನಗೆ ಮುಖ್ಯಮಂತ್ರಿ, ಮಂತ್ರಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಿಂತ ಬಡ ಮಕ್ಕಳಿಗೆ ಶಿಕ್ಷಣ ಉದ್ಯೋಗ ನೀಡುವ ಮೀಸಲಾತಿ ಮುಖ್ಯ ವಾಗಿದೆ" ಎಂದರು.
ಇನ್ನು ಕರ್ನಾಟಕದಲ್ಲಿ ಒಟ್ಟು 3 ಕೋಟಿ ಲಿಂಗಾಯಿತ ಜನಸಂಖ್ಯೆ ಇದ್ದು, ಸಮಾಜಕ್ಕೆ ಸಂವಿಧಾನ ಬದ್ಧ ಸವಲತ್ತುಗಳು ಇನ್ನು ಸಿಕ್ಕಿಲ್ಲ. ನಾವು ಕೇವಲ ಮತ ಕೊಡಲು ಹಾಗೂ ಕಂದಾಯ ಕಟ್ಟಲು ಮೀಸಲಾಗಿದ್ದೇವೆ. ಲಿಂಗಾಯತ ಸಮುದಾಯದಲ್ಲಿ 110 ಪಂಗಡಗಳಿದ್ದು ಇದರಲ್ಲಿ 34 ಪಂಗಡಗಳಿಗೆ '2ಎ' ಮೀಸಲಾತಿ ಸೌಲಭ್ಯ ನೀಡಲಾಗಿದೆ. 12 ಪಂಗಡಗಳು '3ಬಿ' ಮೀಸಲಾತಿ ಪಡೆದಿವೆ. ಉಳಿದ ಪಂಗಡಗಳು ಅವಕಾಶ ವಂಚಿತವಾಗಿವೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಯು.ಸಿ. ನಿರಂಜನ್, ಉಡುಪಿ ಬಸವ ಸಮಿತಿ ಅಧ್ಯಕ್ಷ ಸಿದ್ದರಾಮಣ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.