ಕಾರ್ಕಳ, ಸ. 08 (DaijiworldNews/HR): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿದ್ದ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಕಾರ್ಯಾಚರಿಸುತ್ತಿದ್ದ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ರಾಜ್ಯ ಸರಕಾರ ಸ್ಥಗಿತಗೊಳಿಸಲು ಹೊರಟಿರುವುದು ಮಹಿಳಾ ವಿರೋಧಿ ಕ್ರಮವಾಗಿದೆ ಎಂದು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಅನಿತಾ ಡಿಸೋಜಾ ಆರೋಪಿಸಿದ್ದಾರೆ.
"ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಸಮಯದಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಸಮಾಲೋಚನೆ ಸೇರಿದಂತೆ ನೊಂದ ಮಹಿಳೆಯರಿಗೆ ಶಿಕ್ಷಣ-ಉದ್ಯೋಗ ಆರ್ಥಿಕ ನೆರವು ಉಚಿತ ಕಾನೂನು ನೆರವು ಸೇರಿದಂತೆ ಹಲವು ರೀತಿಯ ಸಹಾಯ ಅಲ್ಲದೆ ಸಾಂತ್ವನ ಕೇಂದ್ರಗಳ ಆಪ್ತಸಮಾಲೋಚಕರಿಂದ ಇದುವರೆಗೂ ದೌರ್ಜನ್ಯಕ್ಕೊಳಗಾದ ಸಹಸ್ರಾರು ಮಹಿಳೆಯರು ಸಾಂತ್ವನ ಮತ್ತು ಭರವಸೆ ಪಡೆದುಕೊಂಡಿದ್ದಾರೆ" ಎಂದರು.
ಇನ್ನು ಹಲವು ರೀತಿಯ ಸೇವೆಗಳು ಒಂದೇ ಸೂರಿನಡಿಯಲ್ಲಿ ಸಿಗಬೇಕೆಂಬ ದೃಷ್ಟಿಯಿಂದ ಪ್ರಾರಂಭಿಸಿದ ಸಾಂತ್ವನ ಕೇಂದ್ರಗಳು ಈಗಾಗಲೇ ಕೆಲವು ಕಡೆಗಳಲ್ಲಿ ಮುಚ್ಚಲಾಗಿದೆ. ಉಳಿದ ಕೇಂದ್ರಗಳನ್ನು ಮುಚ್ಚುವ ಹಂತದಲ್ಲಿದೆ. ಸರಕಾರ ಕೈಗೊಂಡ ನಿರ್ಧಾರ ಹಿಂಪಡೆಯಬೇಕು ಎಂದು ಅನಿತಾ ಡಿಸೋಜಾ ಆಗ್ರಹಿಸಿದ್ದಾರೆ.