ಉಡುಪಿ, ಸೆ 8 (DaijiworldNews/MS): ಮಂತ್ರಿ, ಮುಖ್ಯಮಂತ್ರಿ, ಸಚಿವರಕ್ಕಿಂತ ನಮಗೆ ಮೀಸಲಾತಿ ಮುಖ್ಯ, ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆನ್ನುವುದು ನನ್ನ ಉದ್ದೇಶ. ಲಿಂಗಾಯಿತ ಪಂಚಮಸಾಲಿ ಒಳಗೊಂಡಂತೆ , ಬೇರೆ ಲಿಂಗಾಯತರುಗಳಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಸಮಾಜವನ್ನು ಕೇಂದ್ರ ಸರಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆಯಾಗಬೇಕು, ವರದಿ ಸಿದ್ದಪಡಿಸಲು ಇದೇ ಸೆಪ್ಟೆಂಬರ್ 15ರವರೆಗೆ ಕಾಲಾವಾಕಾಶ ಕೇಳಿದ್ದು, ಅಕ್ಟೋಬರ್ 1 ರೊಳಗೆ ಘೋಷಣೆ ಮಾಡಬೇಕು ಇಲ್ಲದಿದ್ದರೆ ಅಕ್ಟೋಬರ್ 1ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ನಡೆಸಲಿದ್ದೇವೆ, ಎಂದು ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನವನ್ನ ಆರಂಭಿಸಿರುವ ಕೂಡಲಸಂಗಮ ಲಿಂಗಾಯತ ಪಂಚಮ ಸಾಲಿ ಮಹಾ ಪೀಠದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಬುಧವಾರ ಉಡುಪಿಯ ಪ್ರ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, "ಪಂಚಮಶಾಲಿಗಳಿಗೆ ಸರಿಯಾದ ಮೀಸಲಾತಿ ಸಿಕ್ಕಿಲ್ಲ. ವರದಿ ಸಿದ್ದಪಡಿಸಲು ಇನ್ನು ಕೇವಲ ಏಳು ದಿನ ಬಾಕಿ ಇವೆ. ಪ್ರತಿಜ್ಞಾ ಅಭಿಯಾನಕ್ಕೆ ಬೆಂಬಲಿಸಿದವರಿಗೆ ಆಶೀರ್ವಾದ, ವಿರೋಧಿಸಿದವರಿಗೆ ನನ್ನ ಅಸಹಕಾರವಿದೆ. ನಾನು ಯಾವುದೇ ಸರಕಾರದ ಪರ-ವಿರೋಧಿಯಲ್ಲ. ನಾನು ಜನರ ಪರವಾಗಿದ್ದೇನೆ. ನಮ್ಮ ಹಕ್ಕುಗಳನ್ನು ಕೇಳುವುದು ನಮ್ಮ ಕರ್ತವ್ಯ, 2ಎ ನ ಶೇಕಡಾವಾರು ಹೆಚ್ಚು ಮಾಡಲಿ. ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಬುದ್ದಿವಂತರಿದ್ದಾರೆ. ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆ ಇದೆ. ಯಾವುದೋ ಕಾಣದ ಕೈಗಳು ನನ್ನ ಅಭಿಯಾನಕ್ಕೆ, ಪಾದಯಾತ್ರೆಯನ್ನು ಮುರಿಯಲು ಕಾಯುತ್ತಿದ್ದಾರೆ. ಇದುವರೆಗೆ ಎಲ್ಲ ಮಾನವನ್ನು ಅಪಮಾನವನ್ನು ಸಹಸಿಕೊಂಡು ಅಭಿಯಾನವನ್ನ ಮುನ್ನೆಡೆಸುತ್ತಿದ್ದೇವೆ ಎಂದು ಹೇಳಿದರು.
ಲಿಂಗಾಯತ ಸಮುದಾಯದಲ್ಲಿ ಸುಮಾರು 110 ಪಂಗಡಗಳಿದ್ದು ಇದರಲ್ಲಿ 34 ಪಂಗಡಗಳಿಗೆ 2ಎ ಮತ್ತು 12 ಪಂಗಡಗಳಿಗೆ 3ಬಿ ಮೀಸಲಾತಿ ಸಿಕ್ಕಿದೆ. ಇದರಿಂದ ಉಳಿದ ಪಂಗಡಗಳು ಅವಕಾಶ ವಂಚಿತವಾಗಿದ್ದು. ಈ ಬಗ್ಗೆ ವರದಿ ಕೋರಿ ಹಿಂದುಳಿದ ವರ್ಗದ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಆಯೋಗ ಕಾಲಾವಾಕಾಶ ಕೇಳಿದೆ ಅದರೊಳಗೆ ನನ್ನ ರಾಜ್ಯವ್ಯಾಪಿ ಅಭಿಯಾನವನ್ನು ಮುಗಿಸಬೇಕು ಎಂದು ಸ್ವಾಮಿಜಿ ಸರಕಾರಕ್ಕೆ ಹಕ್ಕೊತ್ತಾಯ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಯು ಸಿ ನಿರಂಜನ್, ಉಡುಪಿ ಬಸವ ಮಿತಿ ಅಧ್ಯಕ್ಷ ಸಿದ್ದರಾಮ, ಪದಾಧಿಕಾರಿಗಳಾದ ಗಂಗಾಧರ, ಸುರೇಶ್, ಮಲ್ಲಿಕಾರ್ಜುನಪ್ಪ, ಶಂಭುಲಿಂಗ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.