ಮಂಗಳೂರು, ಸೆ. 08 (DaijiworldNews/PY): ಡ್ರಗ್ ಕೇಸ್ ಚಾರ್ಜ್ ಶೀಟ್ನಲ್ಲಿ ನಟಿ ಅನುಶ್ರೀ ಹೆಸರು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, "ನಾನು ಕಮಿಷನರ್ ಆಗಿ ಬರುವಷ್ಟರಲ್ಲಿ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆಯಾಗಿತ್ತು" ಎಂದಿದ್ದಾರೆ.
ಅನುಶ್ರೀ ಡ್ರಗ್ ಸೇವನೆ ಬಗ್ಗೆ ನಾನು ಹೇಳಿಕೆ ನೀಡಿಲ್ಲ ಎಂದ ಕಿಶೋರ್ ಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಸುದ್ದಿಯನ್ನು ಇಂದು ಮಾಧ್ಯಮದಲ್ಲಿ ನೋಡಿದೆ. ಆ ಕೇಸ್ನ ಸ್ಟೇಟಸ್ ಬಗ್ಗೆ ಮಾಹಿತಿ ಪಡೆದಿದ್ದೇನೆ. ಚಾರ್ಜ್ ಶೀಟ್ ಪ್ರಕರಣದ ಅಂತಿಮ ವರದಿಯಾಗಿರುತ್ತದೆ. ಅದು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಟ್ರಯಲ್ ನಡೆಯುತ್ತಿದೆ. ಪ್ರಕರಣದ ಸಂಬಂಧ ಮತ್ತೆ ಅನುಶ್ರೀ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇಲ್ಲ" ಎಂದು ಹೇಳಿದ್ದಾರೆ.
ಚಾರ್ಜ್ ಶೀಟ್ನಲ್ಲಿರುವ ಹೇಳಿಕೆ ನನ್ನದಲ್ಲ ಎಂದ ಕಿಶೋರ್ ಶೆಟ್ಟಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, "ಚಾರ್ಜ್ ಶೀಟ್ ವೇಳೆ ಸ್ಪಷ್ಟವಾಗಿ ಅವರಿಗೆ ಓದಿ ಹೇಳಿಸಿದ ಬಳಿಕ ಸಹಿ ಪಡೆಯಲಾಗುತ್ತದೆ. ಪ್ರತಿಯೊಂದು ಪ್ರಕರಣದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ. ಇದು ನಾನು ಹೇಳಿಕೆ ನೀಡಲಿಲ್ಲ ಎನ್ನುವುದು ತಪ್ಪು. ಇದನ್ನು ಅವರು ನ್ಯಾಯಾಲಯದಲ್ಲಿಯೇ ಹೇಳಬಹುದಿತ್ತು" ಎಂದಿದ್ದಾರೆ.
ಇಂದ್ರಜಿತ್ ಲಂಕೇಶ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, "ಪೊಲೀಸರ ತನಿಖೆಯ ಮೇಲೆ ಯಾವುದೇ ಸಂಶಯ ಬೇಡ. ವಿಚಾರಣೆ ಸರಿಯಾಗಿ ನಡೆಸಿಲ್ಲ ಎನ್ನುವುದು ತಪ್ಪು" ಎಂದು ಹೇಳಿದ್ದಾರೆ.
"ಡ್ರಗ್ ಪ್ರಕರಣದ ಬಗ್ಗೆ ನನಗೆ ಏನೂ ತಿಳಿದಿಲ್ಲ. ನನಗೆ ಚಾರ್ಜ್ ಶೀಟ್ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ನಟಿ ಅನುಶ್ರೀ ಅವರೊಂದಿಗೆ ಯಾವುದೇ ಪಾರ್ಟಿ ಮಾಡಿಲ್ಲ. ಚಾರ್ಜ್ ಶೀಟ್ನಲ್ಲಿರುವ ಹೇಳಿಕೆ ನನ್ನದಲ್ಲ" ಎಂದು ಆರೋಪಿ ಕಿಶೋರ್ ಶೆಟ್ಟಿ ಹೇಳಿದ್ದರು.