ಬಂಟ್ವಾಳ, ಸೆ. 07 (DaijiworldNews/PY): ಪ್ರಸ್ತುತ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರೌಢಶಾಲಾ ಶಿಕ್ಷಕ ವೆಂಕಟರಮಣ ಆಚಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಜೀಪಮೂಡ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಜೀಪಮೂಡ ಗ್ರಾ.ಪಂ. ಸದಸ್ಯ ಸೀತರಾಮ ಅಗೋಳಿಬೆಟ್ಟು ಮಾತನಾಡಿ, "ಸಜೀಪಮೂಡದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ. ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧ್ಯಾಪಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಅವರ ಸೇವೆ ಹಾಗೂ ಅರ್ಹತೆ ಸಂದ ಗೌರವವಾಗಿದೆ" ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಶಿಕ್ಷಕ ವೆಂಕಟ್ರಮಣ ಆಚಾರ್ ಮಾತನಾಡಿ, "ಮುಖ್ಯೋಪಾಧ್ಯಾಯರು, ಸಹಶಿಕ್ಷಕರ ಪ್ರೋತ್ಸಾಹ, ಸಹಕಾರದಿಂದಾಗಿ ಪ್ರಶಸ್ತಿ ಬರಲು ಸಾಧ್ಯವಾಯಿತು" ಎಂದರು.
ಈ ಸಂದರ್ಭ ವಯೋ ನಿವೃತ್ತಿ ಹೊಂದಿರುವ ಈ ಹಿಂದೆ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕುಸುಮ ಪಿ.ಎಸ್. ಅವರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸುರೇಶ್ ಸಾರ್ತಾವು, ದಿನಕರ್, ನಳಿನಾಕ್ಷಿ, ರೋಹಿಣಾಕ್ಷಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೋ, ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕರಾದ ಸೋಮಪ್ಪ ಮಡಿವಾಳ, ಅಮಾನುಲ್ಲಾ ಖಾನ್ ಶುಭಾಶಂಸನೆಗೈದರು.
ಉಪಪ್ರಾಂಶುಪಾಲೆ ಜಯಲಕ್ಷ್ಮೀ ಸ್ವಾಗತಿಸಿದರು, ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ವಂದಿಸಿದರು, ಶಿಕ್ಷಕಿ ಸುಲೋಚನಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಗಣೇಶ ಬಿ., ಶರ್ಮಿಳಾ ಶೆಣೈ, ಆಲಿಸ್ ಪಾಯ್ಸ್, ಶ್ವೇತಾ, ಪ್ರಿಯಾ ಉಪಸ್ಥಿತರಿದ್ದರು.