ಕಾರ್ಕಳ, ಸೆ 07 (DaijiworldNews/MS): ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಹಾಗಾಗಿ ಅವರ ಜವಾಬ್ದಾರಿ ಹೆಚ್ಚು ಇದೆ. ಅವರಲ್ಲಿ ಸಮಾಜದ ಬಗ್ಗೆ ಉತ್ತಮ ಕಲ್ಪನೆಗಳನ್ನು ಬಿತ್ತ ಬೇಕು ಎಂದು ವಿಶ್ರಾಂತ ವಿದ್ಯಾಂಗ ಪರಿವೀಕ್ಷಕ ಅಡಂದಾಲು ಕರುಣಾಕರ ಹೆಗ್ಡೆ ಹೇಳಿದರು.
ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಬ್ರದರ್ಸ್ ಸ್ಪೋಟ್ಸ್ ಆಂಡ್ ಯೂತ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಶಿಕ್ಷಕರ ಮತ್ತು ಅಡುಗೆಯವರ ಹೆಸರಲ್ಲಿ ನೆರಳು ನೀಡುವ, ಫಲ ನೀಡುವ ಗಿಡಗಳನ್ನು ನೆಡುವ ವಿನೂತನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಗುರುವೃಂದ ವೃಕ್ಷ ಗೌರವ ಕಾರ್ಯಕ್ರಮವನ್ನು ಗಿಡಗಳನ್ನು ಶಿಕ್ಷಕರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದ ಮಾತನಾಡಿ, ಕನ್ನಡ ನಾಡು- ನುಡಿಯ ಸೇವೆ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯಾರೇ ಕೆಲಸ ಮಾಡಿದರೂ ಅದಕ್ಕೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು, ಅನಾವಶ್ಯಕ ಟೀಕೆಗೆ ಸಮಯ ವ್ಯರ್ಥ ಮಾಡಬಾರದು ಎಂದರು.
ವಿಶ್ರಾಂತ ಮುಖ್ಯೋಪಾಧ್ಯಾಯ ಮೌರೀಸ್ ತಾವ್ರೋ ಶಿಕ್ಷಕರನ್ನು ಅಭಿನಂದಿಸಿದರು. ಶಾಲೆಯಲ್ಲಿ ಆರು ವರ್ಷಗಳ ಕಾಲ ಮತ್ತು ಒಟ್ಟು ೧೬ ವರ್ಷ ಗೌರವ ಶಿಕ್ಷಕಿಯಾಗಿದ್ದು ಈಗ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಚರಿತ್ರಾ ಎಂ ಅವರನ್ನು ಸನ್ಮಾನಿಸಲಾಯಿತು.
ಯುವ ಉದ್ಯಮಿ ಅರುಣ್ ಶೆಟ್ಟಿಗಾರ್, ಪಂಚಾಯತ್ ಸದಸ್ಯೆ ಯಶೋದಾ ಶೆಟ್ಟಿ, ಬೆಳದಿಂಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ತೀ ಅಜೆಕಾರು, ಮಕ್ಕಳ ವಿಭಾಗದ ಸುನಿಧಿ ಅಜೆಕಾರು, ಸುನಿಜ ಅಜೆಕಾರು, ಶಾಲಾ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಬ್ರದರ್ಸ್ ಸದಸ್ಯರು ಉಪಸ್ಥಿತರಿದ್ದರು. ವಾರ್ಡಿನ ಪಂಚಾಯತ್ ಸದಸ್ಯರಾದ ಜಾನ್ ಟೆಲಿಸ್, ಅಬ್ದುಲ್ ಗಫೂರ್ ಸಹಕರಿಸಿದರು.
ಮುಖ್ಯೋಪಾಧ್ಯಾಯ ಎಸ್.ಆರ್. ವಿಶ್ವನಾಥ ಸ್ವಾಗತಿಸಿದರು. ಜಯರಾಮ ಆಚಾರ್ಯ ವಂದಿಸಿದರು.