ಉಡುಪಿ, ಸೆ 07 (DaijiworldNews/MS): "ರಾಜ್ಯದ ನಾಲ್ಕು ಪ್ರಮುಖ ನಗರ ಗುಲ್ಬರ್ಗಾ, ಬೆಳಗಾಂ, ಹುಬ್ಬಳ್ಳಿ, ಧಾರವಾಡದಲ್ಲಿ ಚುನಾವಣೆ ಫಲಿತಾಂಶವೂ ಸರಕಾರ ಯಾವ ರೀತಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ ಎನ್ನುವುದಕ್ಕೆ ಇದು ನಿದರ್ಶನ. ಇನ್ನು ನಿನ್ನೆಯ ಫಲಿತಾಂಶ ಕಾಂಗ್ರೆಸ್ ಗೆ ಯಾವ ನಿರಾಶೆ ಉಂಟಾಗಿಲ್ಲ. ದೇಶದ, ರಾಜ್ಯದ ಜನತೆಗೆ ಗೊತ್ತಿದೆ. ಪೆಟ್ರೋಲ್ ಬೆಲೆ, ಡಿಸೇಲ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಏನಾಗಿದೆ ಎನ್ನುವುದನ್ನು . ಇಂತಹ ಸಂದರ್ಭದಲ್ಲೂ ಗೆದ್ದಿದ್ದಾರೆ ಎಂದರೆ, ಯಾವ ರೀತಿ ಅಧಿಕಾರದ ದುರುಪಯೋಗವಾಗ್ತಿದೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಡಾ ಜಿ ಪರಮೇಶ್ವರ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, " ಅಂದು ಪಕ್ಷದ ಅಧ್ಯಕ್ಷನಾಗಿದ್ದಾಗ ಸಕ್ರಿಯವಾಗಿದ್ದೆ, ಇಂದು ಪಕ್ಷ ಕೊಟ್ಟ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ಪಕ್ಷ ಏನು ಕೆಲಸ ಕೊಡ್ತದೋ ಅದನ್ನು ಜವಾಬ್ದಾರಿಯುತವಾಗಿ ಮಾಡುತ್ತೇನೆ. ಪಕ್ಷ ಅನೇಕ ಅವಕಾಶಗಳನ್ನ ಕೊಟ್ಟಿದೆ. ಮುಂದೆಯೂ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು. ಮುಖ್ಯಮಂತ್ರಿ ಆಗುವ ಅರ್ಹತೆ ಉಳ್ಳವರು ಎಂದು ಮಾಧ್ಯಮದವರು ಪ್ರಶ್ನಿಸಿದಾಗ "ಆ ಮಾತು ಈಗ ಅಪ್ರಸ್ತುತ" ಎಂದು ಮಾತು ಮೊಟಕುಗೊಳಿಸಿದರು.
ಹಿಂದೆ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಗಳ ಸೀಟ್ ಗಳನ್ನ ಗೆದ್ದಿದ್ದೇವೆ. ಇನ್ನು ಮುಂದೆಯೂ ಅಸೆಂಬ್ಲಿ ಚುನಾವಣೆಯಲ್ಲಿ ಅತೀ ಹೆಚ್ಚು ಸೀಟು ಗೆದ್ದು ಮುಂದೆ ಸರಕಾರ ರಚಿಸುವ ಆತ್ಮವಿಶ್ವಾಸ ಇದೆ ಎಂದರು.
ಡಿಕೆಶಿಯವರು ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ, "ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಅಲ್ಲಿನ ಸ್ಥಳೀಯ ಮುಖಂಡರೇ ಪ್ರಚಾರಕ್ಕಿಳಿದು, ಗೆಲ್ಲಿಸಿಕೊಡುತ್ತಾರೆ. ಹಾಗಾಗಿ ಡಿಕೆಶಿ ಪ್ರಚಾರದಲ್ಲಿ ಭಾಗವಹಿಸಿಲ್ಲ ಎನ್ನುವುದು ದೊಡ್ಡ ವಿಷಯ ಅಲ್ಲ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಭೆ ಕರೆದಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆಸಬೇಕು, ಸರಕಾರಕ್ಕೆ ಯಾವ ಪ್ರಶ್ನೆ ಹಾಕಬೇಕು, ಆದರೆ ಇದುವರೆಗೆ ಯಾವ ಅಜೆಂಡಾ ನಿಗದಿಯಾಗಿಲ್ಲ. ಕೋವಿಡ್ ವಿಚಾರದಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ. ಬೆಲೆ ಏರಿಕೆ, ಹಣಕಾಸಿನ ವಿಚಾರ, ಸ್ಥಗಿತವಾಗಿರುವ ಸರಕಾರಿ ಯೋಜನೆಗಳು, ಅನುದಾನ ಸಿಗದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ಅಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಆರೋಪ ಮಾಡುತ್ತಿರುವ ಗುಂಪುಗಾರಿಕೆಯ ಬಗ್ಗೆ ಇಬ್ಬರಿಗೂ ಜವಾಬ್ಧಾರಿ ಇದೆ. ಗುಂಪುಗಾರಿಕೆ ಮಾಡಲು ಅವಕಾಶ ಇಲ್ಲ ಪಕ್ಷ ಸಂಘಟನೆಯಲ್ಲಿ ಎಲ್ಲರಿಗೂ ಜವಾಬ್ದಾರಿ ಇದೆ. ಪಕ್ಷದ ನಾಯಕರೊಳಗೆ ಯಾವ ಗುಂಪುಗಾರಿಕೆಯೂ ಇಲ್ಲ. ಅದನ್ನ ಯಾರು ಸೃಷ್ಟಿ ಮಾಡುತ್ತಾರೋ ಎನ್ನುವುದು ಗೊತ್ತಿಲ್ಲ, ಎಂದರು.
ಸುಮಾರು ೧೫೦ ಕೋಟಿ ರೂಪಾಯಿ ಸರಕಾರದ ಹಣವನ್ನ ಜಾತಿಗಣತಿಗೆ ಖರ್ಚು ಮಾಡಿದ್ದಾರೆ. ಅದನ್ನ ಹೊರಗಡೆ ತರಬೇಕು ಎನ್ನುವುದು ಎಲ್ಲರ ಅಭಿಪ್ರಾಯ. ನಮ್ಮ ಅವಧಿಯಲ್ಲಿ ಅದು ಸಂಪೂರ್ಣವಾಗಿರಲಿಲ್ಲ. ಈಗ ಆ ವರದಿ ಸರಕಾರದ ಮುಂದೆ ಇದೆ. ಅದರಲ್ಲಿರುವ ನ್ಯೂನತೆಗಳನ್ನ ಕಂಡು ಹಿಡಿದು ಸದನದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದಲ್ವ. ಸಮುದಾಯದ ಸಂಖ್ಯೆಯಲ್ಲಿ ಏರುಪೇರು ವ್ಯತ್ಯಾಸ ಇರುವುದು ಸಹಜ. ನ್ಯೂನತೆ, ಬದಲಾವಣೆ ಬೇಕಿದ್ದರೆ ಸದನದಲ್ಲಿ ಚರ್ಚಿಸಲಿ. ಸರಕಾರ ಮುಜುಗರ ಪಡುವುದಕ್ಕೇನಿದೆ? ಎಂದು ಪ್ರಶ್ನಿಸಿದರು.