ಮಂಗಳೂರು, ಸೆ. 07 (DaijiworldNews/PY): ತಾನುಂಡು ಇತರರಿಗೂ ಹಂಚಿಕೊಂಡು ಬದುಕುವ ಈ ಪೊಲೀಸ್ ಅಧಿಕಾರಿಗೆ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಆದರೆ, ಈ ದಂಪತಿಗಳಿಗೆ ಮಕ್ಕಳಿಲ್ಲ ಎನ್ನುವ ಕೊರಗು. ಮಕ್ಕಳಿಲ್ಲ ಎನ್ನುವ ಕೊರೆತ ಇದ್ದರೂ ಕೂಡಾ ಪ್ರಾಣಿಗಳ ಮೇಲಿನ ಕಾಳಜಿಯಿಂದ ನಾಯಿಗಳಿಗೆ ಆಹಾರ ನೀಡುತ್ತಾ ಆ ನೋವನ್ನು ಮರೆಯುತ್ತಿದ್ದಾರೆ.
ಮಂಗಳೂರಿನ ರಿಸರ್ವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪೂವಪ್ಪ.ಕೆ ಹಾಗೂ ಅವರ ಪತ್ನಿ ರಾಗಿಣಿ ಅವರು ಕಳೆದ 15 ವರ್ಷಗಳಿಂದ ಮಂಗಳೂರಿನ ಪೊಲೀಸ್ ಕ್ವಾಟ್ರಸ್ನಲ್ಲಿ ವಾಸವಾಗಿದ್ದು, ಅಂದಿನಿಂದ ನಿತ್ಯವೂ ಹತ್ತಾರು ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ.
ಕ್ವಾಟ್ರಸ್ನ ಸುತ್ತಮುತ್ತ ಇರುವ ಸುಮಾರು 27 ಬೀದಿ ನಾಯಿಗಳಿಗೆ ಬೆಳಗ್ಗೆ ಹಾಗೂ ರಾತ್ರಿ ಮಾಂಸಾಹಾರವನ್ನೇ ಹಾಕುತ್ತಿದ್ದಾರೆ. ನಾಯಿಗಳ ಆಹಾರಕ್ಕಾಗಿಯೇ ಈ ದಂಪತಿಗಳು ತಿಂಗಳಿಗೆ 15 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ.
ಈ ಪೊಲೀಸ್ ದಂಪತಿ, ನಿತ್ಯವೂ ನಾಯಿಗಳಿಗೆ ಕೋಳಿ ಮಾಂಸ, ಲೆಗ್ ಪೀಸ್ ಊಟವನ್ನೇ ನೀಡುತ್ತಾರಂತೆ. ರಾಗಿಣಿಯವರೇ ನಿತ್ಯ ಮಾಂಸಾಹಾರ ತಯಾರಿಸುತ್ತಾರೆ. ಆದರೆ, ಅವರು ಎಂಜಲು ಹಳಸಿದ್ದ ಆಹಾರವನ್ನು ಹಾಕುವುದಿಲ್ಲವಂತೆ. ಯಾವುದೇ ನಾಯಿ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಹಾಲು, ಬಿಸ್ಕತ್ತು ನೀಡಿ, ಔಷಧೋಪಾಚಾರವನ್ನೂ ಮಾಡುತ್ತಾರೆ.
ತುರ್ತು ಸಂದರ್ಭಗಳಲ್ಲಿ ದಂಪತಿಗಳು ಮನೆಯಲ್ಲಿ ಇಲ್ಲದೇ ಇದ್ದಾಗ, ನಾಯಿಗಳಿಗೆ ಆಹಾರ ನೀಡುವಂತೆ ಪೂವಪ್ಪ ಅವರು ತಮ್ಮ ಸಹೋದ್ಯೋಗಿಗಳಿಗೆ ತಿಳಿಸುತ್ತಾರೆ. ಮಕ್ಕಳಿಲ್ಲದ ನೋವನ್ನು ಮರೆಯಲು ಈ ದಂಪತಿಗಳು ಪ್ರಾಣಿಗಳಿಗೆ ಆಹಾರ ನೀಡುತ್ತಿರುವುದು ಪ್ರಶಂಸನೀಯ ಕಾರ್ಯ.