ಮಂಗಳೂರು ಸೆ 07 (DaijiworldNews/MS): ಕರಾವಳಿ ಭಾಗದಲ್ಲಿ ಪರ್ಯಾಯ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೀನುಗಾರಿಕೆ ಅತ್ಯಂತ ಮಹತ್ವಪೂರ್ಣದ್ದಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಅಭಿಪ್ರಾಯಪಟ್ಟರು.
ಅವರು ಸೆ.6ರ ಭಾನುವಾರ ನಗರದ ಹೊಯ್ಗೆ ಬಜಾರ್ನಲ್ಲಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಕೇಂದ್ರ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಂಚಾರಿ ಶಿಥಿಲೀಕರಣ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.ಈಗಾಗಲೇ ಸಾಕಷ್ಟು ಜನರಿಗೆ ಉದ್ಯೋಗ ಒದಗಿಸಿರುವ ಮೀನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಹಾಗೂ ಆರ್ಥಿಕವಾಗಿ ಸಬಲರಾಗದ ಕೆಲವೊಂದು ವೃತ್ತಿಯ ಬದಲಿಗೆ ಪರ್ಯಾಯ ಉದ್ಯೋಗ ಒದಗಿಸಿಕೊಡಲು ಹಾಗೂ ಗ್ರಾಮೀಣ ಭಾಗಗಳಲ್ಲಿಯೂ ಮೀನುಗಾರಿಕೆ ಒತ್ತು ನೀಡಲಾಗುವುದು. ನಾಡಿನಾದ್ಯಂತ ತಾಜಾ ಮೀನು ಸರಬರಾಜು ಮಾಡುವ ಮೂಲಕ ತ್ವರಿತವಾಗಿ ಒದಗಿಸಿಕೊಡುವ ನಿಟ್ಟಿನಲ್ಲಿ ಶೀಥಲೀಕರಣ ವಾಹನ ಉಪಯುಕ್ತವಾಗಲಿದೆ ಎಂದರು.
ಕಡಲಿನಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಮೀನಿನ ಸಂತತಿಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸುವುದ ಅತ್ಯಂತ ಅಗತ್ಯ, ಮೀನಿನ ಸಂತತಿಗೆ ಹಾನಿಯಾಗದಂತೆ ಸಮುದ್ರದಿಂದ ಹೆಚ್ಚು ಮೀನು ಪಡೆಯಲು ವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಿರ್ವಹಿಸಬೇಕಿದೆ ಎಂದು ಸಚಿವರು ಹೇಳಿದರು.
ಆತ್ಮ ನಿರ್ಭರ ಯೋಜನೆ ಮೀನುಗಾರಿಕೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಲಿದೆ, ಮೀನುಗಾರಿಕೆಯ ಮೂಲಕ ಸಾಕಷ್ಟು ಜನರು ಸ್ವಾವಲಂಬನೆ ಯೊಂದಿಗೆ ಉದ್ಯೋಗವಕಾಶ ಸೃಷ್ಟಿಗೆ ಸಾಧ್ಯವಾಗಿದೆ. ರಾಜ್ಯದ ಜನರಿಗೆ ತಾಜಾ ಮೀನು ಅಲ್ಲಿಯೇ ಸ್ಥಳೀಯವಾಗಿ ದೊರೆತಲ್ಲಿ ಮೀನು ಬಳಕೆದಾರರು ಹೆಚ್ಚಬಹುದು, ಮೀನಿಗೆ ಬೇಡಿಕೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್, ಮೀನಿನ ಸ್ಥಳೀಯ ಮಾರುಕಟ್ಟೆಯ ವಿಸ್ತರಣೆ ಯೋಜನೆಯನ್ನು ಮೀನುಗಾರಿಕಾ ನಿಗಮದ ಮೂಲಕ ಸಂಚಾರಿ ಶೀಥಲೀಕರಣ ಸರಪಣಿ ಯೋಜನೆಯನ್ನು ಅನುಷ್ಟಾನಗೊ ಳಿಸಲಾಗಿದೆ. ಮೀನುಗಾರಿಕೆ ಹಾಗೂ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, ರಾಜ್ಯ ಸರಕಾರವು ಮೀನುಗಾರಿಕೆಯ ಅಭಿವೃದ್ದಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ, ನೆನೆಗುದಿಗೆ ಬಿದ್ದಿದ್ದ ಮಂಗಳೂರು ಮೀನುಗಾರಿಕಾ ಬಂದರಿನ (ಧಕ್ಕೆ) ಮೂರನೆಯ ಹಂತದ ವಿಸ್ತರಣಾ ಕಾಮಗಾರಿಗೆ 22 ಕೋಟಿ ರೂ.ಗಳ ಅನದಾನವನ್ನು ಸರಕಾರ ಬಿಡುಗಡೆ ಮಾಡಿದೆ, ಕರಾವಳಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಸುಮಾರು 16 ಯೋಜನೆಗಳಿಗೆ 1,100 ಕೋಟಿ ರೂಪಾಯಿಗಳ ಮಂಜೂರಾತಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಅದರಲ್ಲಿ ಪ್ರಥಮ ಹಂತದಲ್ಲಿ 300 ಕೋಟಿ ರೂಪಾಯಿಗಳಿಗೆ ಮಂಜೂರಾತಿ ದೊರೆತು ಬಿಡುಗಡೆಯಾಗಲಿದೆ, ಹಳೆ ಬಂದರಿನ (ಧಕ್ಕೆ)ಬಳಿ ಪೆಲೀಟಿಂಗ್ ಜಟ್ಟಿ ನಿರ್ಮಾಣಕ್ಕೆ 9.5 ಕೋಟಿ ರೂಪಾಯಿ ಹಾಗೂ ನಾಡದೋಣಿ ಜಟ್ಟಿ ನಿರ್ಮಾಣಕ್ಕೆ 3.25 ಕೋಟಿ ರೂ.ಗಳು ಬಿಡುಗಡೆಯಾಗಿದೆ, ಮಂಗಳೂರು ಹಳೆ ಬಂದರನ್ನು ಉನ್ನತೀಕರಿಸಲು ಸುಮಾರು 100 ಕೋಟಿ ರೂಗಳ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಹಿಂದಿನ ಮೀನುಗಾರಿಕೆ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹಾಲಿ ಸಚಿವರಾದ ಎಸ್. ಅಂಗಾರ ಅವರ ಸಹಕಾರದಿಂದ ಈ ಅನುದಾನ ಬಿಡುಗಡೆಗೆ ಸಾಧ್ಯವಾಗಿದೆ, ಕಿನ್ನಿಗೋಳಿಯಲ್ಲಿ 50 ಎಕರೆ ಪ್ರದೇಶದಲ್ಲಿ ಮೇಗಾ ಸೀ ಫುಡ್ ಪಾರ್ಕ್ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ಅನುಮೋದನೆ ದೊರೆತಿದೆ ಎಂದು ಶಾಸಕರು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ರಾಜ್ಯದಲ್ಲಿ 50 ಕಡೆ ಹಸಿ ಮೀನಿನ ಸ್ಟಾಲ್ ಅನ್ನು ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಆರಂಭಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮೂಲಕ ಮೀನಿನ ಸಾಗಾಟಕ್ಕೆ ಹವಾನಿಯಂತ್ರಿತ ವಾಹನ ಯೋಜನೆಗೆ ಎರಡು ಕೋಟಿ ರೂಪಾಯಿ ಮಂಜೂರಾತಿ ದೊರೆತಿದೆ, ಇದರಿಂದ ಎಂಟು ಹವಾ ನಿಯಂತ್ರಿತ ವಾಹನ ಖರೀದಿಸಲಾಗಿದೆ ಎಂದರು.
ಈ ಎಂಟು ವಾಹನಗಳಲ್ಲಿ ನಾಲ್ಕು ಟನ್ ಸಾಮಥ್ರ್ಯದ ಮೂರು, ಎರಡು ಟನ್ ಸಾಮಥ್ರ್ಯದ ನಾಲ್ಕು ವಾಹನ, ಒಂದು ಟನ್ ಸಾಮಥ್ರ್ಯದ ಒಂದು ಮೀನು ಸಾಗಾಟದ ಹವಾನಿಯಂತ್ರಿತ ವಾಹನ ರಾಜ್ಯದ 50 ಸ್ಟಾಲುಗಳಿಗೆ ತಾಜಾ ಮೀನು ಸರಬರಾಜು ಮಾಡಲಿದೆ, ಈ ಪೈಕಿ ಹತ್ತು ಸ್ಟಾಲ್ಗಳನ್ನು ಮೀನುಗಾರಿಕಾ ನಿಗಮ ನೇರವಾಗಿ ನಡೆಸುತ್ತಿದೆ. ಉಳಿದ ಸ್ಟಾಲ್ ಗಳನ್ನು ಖಾಸಗಿಯವರ ಮೂಲಕ ನಡೆಸಲಾಗುತ್ತಿದೆ. ಈ ವಾಹನದ ಮೂಲಕ ಸಮುದ್ರದಿಂದ ಹಿಡಿದ ಮೀನು ಕಡೆದಂತೆ ಸಂರಕ್ಷಿಸಿ ದೂರದ ಊರುಗಳ ಗ್ರಾಹಕರಿಗೆ ನೀಡಲು ಅನುಕೂಲವಾಗಲಿದೆ. ಕಳೆದ 50 ವರ್ಷಗಳಿಂದ ಮೀನುಗಾರಿಕಾ ಅಭಿವೃದ್ಧಿ ನಿಗಮ ವಿವಿಧ ರೀತಿಯಲ್ಲಿ ಮೀನುಗಾರಿಕೆ ಗೆ ಕೊಡುಗೆ ನೀಡುತ್ತಾ ಬಂದಿದೆ ಎಂದು ನಿತಿನ್ ಕುಮಾರ್ ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮರಲಿಂಗಪ್ಪ ದೊಡ್ಡಮನಿ, ನಿಗಮದ ಸಲಹೆಗಾರ ವಿ.ಕೆ.ಶೆಟ್ಟಿ, ನಿರ್ದೇಶಕ ಸಂದೀಪ್ ಕುಮಾರ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಹಾನಗರ ಪಾಲಿಕೆ ಸದಸ್ಯೆ ರೇವತಿ ಹಾಗೂ ಇತರೆ ಗಣ್ಯರು ಹಾಜರಿದ್ದರು