ಉಡುಪಿ, ಸೆ 07 (DaijiworldNews/MS): ಉಡುಪಿಯ ನಗರ ಭಾಗದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಒಂದೆಡೆ ನಗರದೊಳಗೆ ವಾಹನ ದಟ್ಟಣೆಯ ಕಿರಿಕಿರಿ ಇನ್ನೊಂದೆಡೆ ನಗರದ ಹೊರಭಾಗದಲ್ಲಿನ ಮುಖ್ಯ ಜಂಕ್ಷನ್’ನಲ್ಲಿ ಪರಿಸ್ಥಿತಿ ಬೇರೆಯದೇ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅವೈಜ್ಞಾನಿಕ ತಿರುವು, ಸರ್ವಿಸ್ ರಸ್ತೆ ಇಲ್ಲದಿರುವುದು, ಟ್ರಾಫಿಕ್ ಸಿಗ್ನಲ್ ಇಲ್ಲದಿರುವುದು ಈ ಎಲ್ಲಾ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇನ್ನೊಂದೆಡೆ ಟ್ರಾಫಿಕ್ ಪೋಲಿಸ್ ಸಿಬ್ಬಂದಿಗಳ ಕೊರತೆಯೂ ಎದ್ದು ಕಾಣುತ್ತಿದೆ. ಸಂಚರ ದಟ್ಟಣೆಯನ್ನು ನಿಭಾಯಿಸಿ ಸುಗಮ ವಾಹನ ಸಂಚಾರವನ್ನು ಮಾಡಿಕೊಡುವಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಹೈರಾಣರಾಗಿರುತ್ತಾರೆ. ಇದು ಒಂದು ದಿನದ ಸ್ಥಿತಿಯಲ್ಲ. ಪ್ರತಿದಿನವೂ ಚಿತ್ರಣ.
ಲಾಕ್ ಡೌನ್ ನಂತರ ಜನ ತಮ್ಮ ಸ್ವಂತ ವಾಹನಗಳಲ್ಲಿ ಓಡಾಡುವುದು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಉಡುಪಿ ನಗರದಲ್ಲಿ ಮುಂಜಾನೆ ಮತ್ತು ಸಂಜೆ ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿದ್ದಲ್ಲ. ಕಲ್ಸಂಕ ಜಂಕ್ಷನ್, ಸಿಟಿ ಬಸ್ ನಿಲ್ದಾಣ, ಅಂಬಲಪಾಡಿ ಜಂಕ್ಷನ್ ಹೀಗೆ ಇಲ್ಲಿ ಟ್ರಾಫಿಕ್ ಜಾಮ್ ಕಂಡು ಬರುತ್ತದೆ. ಆದರೆ ಸಂತೆಕಟ್ಟೆಯ ಕಲ್ಯಾಣಪುರ ಜಂಕ್ಷನ್ ಸ್ಥಿತಿ ಮಾತ್ರ ತೀರಾ ಗಂಭೀರವಾಗಿದೆ.
ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಸರಿಯಾದ ಬಸ್ ಸ್ಟ್ಯಾಂಡ್ ಇಲ್ಲದಿರುವುದರಿಂದ ಜನ ಡಿವೈಡರ್ ಮೇಲೆ ನಿಂತು ಬಸ್ ಗೆ ಕಾಯುವ ಪರಿಸ್ಥಿತಿ. ಓರ್ವ ವ್ಯಕ್ತಿ ಈ ಜಂಕ್ಷನ್ ನಲ್ಲಿ ದಾಟಬೇಕಾದರೆ ಎಂಟು ದಿಕ್ಕುಗಳನ್ನ ನೋಡಿ ದಾಟಬೇಕು. ಇದರ ಮಧ್ಯೆ ಹೆದ್ದಾರಿಯಲ್ಲಿ ದುತ್ತನೆ ಎದುರಾಗುವ ಬೃಹತ್ ಗಾತ್ರದ ವಾಹನಗಳು ಒಮ್ಮೆ ಪಾದಚಾರಿಗಳನ್ನು ಬೆಚ್ಚಿಬೀಳಿಸುತ್ತದೆ. ಇಲ್ಲಿ ಟ್ರಾಫಿಕ್ ನಿರ್ವಹಣೆ ಮಾಡಲು ಕನಿಷ್ಟ ಪಕ್ಷ ಎಂಟು ಮಂದಿ ಸಿಬ್ಬಂದಿಗಳು ಬೇಕೇಬೇಕು. ಟ್ರಾಫಿಕ್ ದಟ್ಟನೆಯ ನಡುವೆ ಜನಪ್ರತಿನಿಧಿಗಳು ಆಗಮಿಸಿದರೆ ಅವರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಇದೇ ಈಗ ಇಲಾಖೆಯ ಮುಂದೆ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಟ್ರಾಫಿಕ್ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿ.
ಒಟ್ಟಾರೆ ಈ ಸಮಸ್ಯೆಯನ್ನು ಆದಷ್ಟು ಬೇಗನೆ ನಿವಾರಿಸಬೇಕಾಗಿದೆ ಎಂದು ಸ್ಥಳಿಯರು, ಪ್ರಯಾಣಿಕರು, ಪಾದಾಚಾರಿಗಳು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.