ಕುಂದಾಪುರ, ಸ .06 (DaijiworldNews/HR): ಜಿಲ್ಲೆಯಲ್ಲಿ 1.4% ಪಾಸಿಟಿವಿಟಿ ಪ್ರಮಾಣ ಇರುವಾಗ ವೀಕೆಂಡ್ ಕರ್ಫ್ಯೂ ಹೇರಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಉಡುಪಿ ಜಿಲ್ಲೆಯ ದೊಡ್ಡ ಸಂತೆಯಾಗಿರುವ ಕುಂದಾಪುರ ಸಂತೆ ಶನಿವಾರ ನಡೆಯುವುದರಿಂದ ವೀಕೆಂಡ್ ಕರ್ಫ್ಯೂವಿನಿಂದ ರೈತರು, ವ್ಯಾಪಾರಸ್ಥರು, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಹಕ್ಕೊತ್ತಾಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಸೋಮವಾರ ಕುಂದಾಪುರದ ಹೋಟೆಲ್ ಶರೋನ್ನ ಹರ್ಷ ರಿಪ್ರೆಶ್ಮೆಂಟ್ನಲ್ಲಿ ನಡೆದ ವರ್ತಕರು, ನಾಗರಿಕರ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಬಿ.ಕಿಶೋರ್ ಕುಮಾರ್ ಕುಂದಾಪುರ, ಈ ಸಂದರ್ಭದಲ್ಲಿ ವೀಕೆಂಡ್ ಕರ್ಫ್ಯೂ ಅಪ್ರಸ್ತುತ. ಅದು ಅಲ್ಲದೇ ಕುಂದಾಪುರದ ಮಟ್ಟಿಗೆ ಶನಿವಾರ ವಾರದಲ್ಲಿ ಅತ್ಯಂತ ಪ್ರಮುಖವಾದ ದಿನವಾಗಿದೆ. ಕುಂದಾಪುರ ಸಂತೆಗೆ ಬೈಂದೂರು, ಹೆಬ್ರಿ, ಬ್ರಹ್ಮಾವರ ತಾಲೂಕುಗಳಿಂದ ರೈತರು, ಸಾರ್ವಜನಿಕರು ಬರುತ್ತಾರೆ. ನಗರದಲ್ಲಿ ವಾರವಿಡೀ ನಡೆಯುವ ವಹಿವಾಟು ಶನಿವಾರ ಒಂದೇ ದಿನ ನಡೆಯುತ್ತದೆ. ವೀಕೆಂಡ್ ಕರ್ಫ್ಯೂವಿನಿಂದ ರೈತರು, ವ್ಯಾಪಾರಸ್ಥರು, ವರ್ತಕರು ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಇದನ್ನು ಕೈಬಿಟ್ಟು, ಕೋವಿಡ್ ನಿಯಂತ್ರಣಕ್ಕೆ ಪರ್ಯಯ ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳುವುದು ಸೂಕ್ತ ಎಂದರು.
ವರ್ತಕರು ಈಗಾಗಲೇ ಅತಂತ್ರರಾಗಿದ್ದಾರೆ. ವೀಕೆಂಡ್ ಕರ್ಫ್ಯೂವಿನಿಂದ ಇನ್ನಷ್ಟು ಹೊಡೆತ ಬೀಳುತ್ತದೆ. ಶಾಲಾ ಕಾಲೇಜುಗಳ ತೆರೆಯಲು ಅವಕಾಶ ಕೊಟ್ಟು ವಾರಂತ್ಯ ಕರ್ಫ್ಯೂ ವಿಧಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶ್ರೀಧರ್ ಪಿ.ಎಸ್. ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಬೇಕರಿ ಉತ್ಪನ್ನ ಮಾರಾಟ ಯೂನಿಯನ್ನ ವಿಶ್ವನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ನಾಯಕ, ಪುರಸಭಾ ನಾಮನಿರ್ದೇಶಿತ ಸದಸ್ಯ ರತ್ನಾಕರ ಕುಂದಾಪುರ, ದಿನೇಶ ಗೋಡೆ, ಸುರೇಶ್ ಭಂಡಾರ್ಕರ್, ಪ್ರವೀಣ್, ರಘುರಾಮ, ದಾಮೋದರ ಪೈ, ತ್ರಿವಿಕ್ರಮ ಪೈ, ಗಿರೀಶ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.