ಉಪ್ಪಿನಂಗಡಿ, ಸ .06 (DaijiworldNews/HR): ಪುತ್ತೂರಿನಿಂದ ಯುವಕರ ತಂಡವೊಂದು ಬೈಕ್ ರೈಡಿಂಗ್ ಗೆ ತೆರಳುತ್ತಿದ್ದಾಗ ನೆಲ್ಯಾಡಿ ಸಮೀಪದ ಎಂಜಿರ ಬಳಿ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಕಂಟೈನರ್ ವಾಹನಕ್ಕೆ ಬೈಕೊಂದು ಢಿಕ್ಕಿ ಹೊಡೆದು ಓರ್ವ ಯುವಕ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ಪುತ್ತೂರು ತಾಲೂಕಿನ ಕೌಡಿಚ್ಚಾರ್ ಸಿಆರ್ ಸಿ ಕಾಲೋನಿ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ 11.30 ರ ಸುಮಾರಿಗೆ ಪುತ್ತೂರಿನಿಂದ 8 ಬೈಕುಗಳಲ್ಲಿ ತಂಡವೊಂದು ಬೈಕ್ ರೈಡಿಂಗ್ ಹೊರಟಿದ್ದು, ಅವುಗಳ ಪೈಕಿ ಕೆಟಿಎಂ ಬೈಕೊಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡಬ ತಾಲೂಕಿನ ಎಂಜಿರ ಸಮೀಪ ತೆರಳುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಹೊಸ ವಾಹನಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ವೇಗದ ಚಾಲನೆಯಿಂದಾಗಿ ಅಪಘಾತವಾಗಿದ್ದು ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟ ಯುವಕನ ಮೈ ಮೇಲೆ ಕಂಟೇನರ್ ಲಾರಿ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಅಪಘಾತದ ವಿಷಯ ಮುಂದೆ ಹೋಗುತ್ತಿದ್ದ ಈತನ ತಂಡದ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಗುಂಡ್ಯ ಕಡೆಯಿಂದ ತಂಡವು ಹಿಂತಿರುಗಿ ಬಂದಿದೆ. ಹೀಗೆ ಬರುತ್ತಿರುವಾಗ ತಂಡದ ಸದಸ್ಯನೊಬ್ಬ ಚಲಾಯಿಸುತ್ತಿದ್ದ ಇನ್ನೊಂದು ಬೈಕ್ ಕೂಡ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.