ಮಂಗಳೂರು, ಸೆ 06 (DaijiworldNews/MS): ಜಿಲ್ಲೆಯಲ್ಲಿ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಮರು ಪರಿಶೀಲಿಸುವಂತೆ ಶಾಸಕ ಯು ಟಿ ಖಾದರ್ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.
ಸೆಪ್ಟೆಂಬರ್ 6 ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಖಾದರ್, " ವಾರಾಂತ್ಯ ಕರ್ಫ್ಯೂವಿನ ಹಿಂದಿನ ತರ್ಕ ಏನೆಂದು ಅರ್ಥವಾಗುತ್ತಿಲ್ಲ, ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಪಾದರಕ್ಷೆ, ಜವಳಿ ಮುಂತಾದ ಇತರ ಅಂಗಡಿಗಳಿಗೆ ಏಕೆ ಅನುಮತಿ ಇಲ್ಲ? 'ಜಿಲ್ಲಾಡಳಿತವು ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಅನ್ನು ಮರುಪರಿಶೀಲಿಸಬೇಕು" ಎಂದು ಒತ್ತಾಯಿಸಿದರು.
"ರಾತ್ರಿಯ ಸಮಯದಲ್ಲಿ ಸಾಮಾಜಿಕ ಕೂಟಗಳನ್ನು ತಪ್ಪಿಸಲು ರಾತ್ರಿ ಕರ್ಫ್ಯೂ ವಿಧಿಸುವುದು ಉತ್ತಮ. ಆದರೆ ವಿಕೇಂಡ್ ಕರ್ಪ್ಯೂವಿನಿಂದ ಯಾವುದೇ ಪ್ರಯೋಜನವಿಲ್ಲ. ವಿಕೇಂಡ್ ಕರ್ಪ್ಯೂ ಇರೋ ಕಾರಣ ಜನರು ವಿಕೇಂಡ್ ಬದಲು ಶುಕ್ರವಾರ ಅಥವಾ ಸೋಮವಾರದಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ" ಎಂದು ಹೇಳಿದರು.
"ಟಾಸ್ಕ್ ಫೋರ್ಸ್ ಸಮಿತಿಯಲ್ಲಿರುವ ನಮ್ಮ ಶಾಸಕರೇ ಮುಖ್ಯಮಂತ್ರಿಗೆ ವಾರಾಂತ್ಯ ಕರ್ಫ್ಯೂ ಹಿಂಪಡೆಯಲು ಮನವಿ ಪತ್ರವನ್ನು ಸಲ್ಲಿಸುತ್ತಾರೆ. ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಮೂಲಕ ಜನರನ್ನು ಸಮಾಧಾನಪಡಿಸಲು ಮತ್ತು ಗೊಂದಲ ಸೃಷ್ಟಿಸಲು ಬಯಸುತ್ತಾರೆ" ಎಂದು ಆರೋಪಿಸಿದರು.
"ಒಂದು ವರ್ಷದ ಹಿಂದೆ ಅವರು ಜಿಲ್ಲೆಗೆ ಪಡಿತರದಲ್ಲಿ ಕುಚಲಕ್ಕಿಯನ್ನು ವಿತರಿಸಲು ಮತ್ತು ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯನ್ನು ತರಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಆದರೆ ಇದನ್ನು ಜಾರಿಗೊಳಿಸದೆ ಒಂದು ವರ್ಷವಾಗಿದೆ. ಸುಮ್ಮನೆ ಮನವಿ ಸಲ್ಲಿಸುವ ಬದಲು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಅದನ್ನು ಕಾರ್ಯಗತಗೊಳಿಸುವ ಕೆಲಸ ಮಾಡಬೇಕು" ಎಂದು ಖಾದರ್ ಒತ್ತಾಯಿಸಿದರು.