ಕಾರ್ಕಳ, ಸೆ 06 (DaijiworldNews/MS): 2024 ವರ್ಷಾವಧಿಯಲ್ಲಿ ದೇಶದ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯನ್ನು ಸಕಾರ ಮಾಡುವ ಹೊಣೆಗಾರಿಕೆಯು ಭಾರತೀಯ ನಾಗರೀಕರದಾಗಿದೆ. ಇದಕ್ಕಾಗಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಮುಂದಾಗಬೇಕು. ಹೀಗಾಗಿ ನಾವು ಕಾರ್ಕಳದಲ್ಲಿ ಆಯ್ಕೆ ಮಾಡಿಕೊಂಡಿರುವುದು ಕಾರ್ಲ ಕಜೆ ಹಾಗೂ ಬಿಳಿ ಬೆಂಡೆ ಬ್ರಾಂಡ್ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ಕುಮಾರ್ ಹೇಳಿದರು.
ಕಾರ್ಕಳದ ವಿಕಾಸ ಕಚೇರಿಯ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಆಯೋಜಿಸಿದ ಕಾರ್ಲ ಬ್ರಾಂಡ್ ಬಿಳಿ ಬೆಂಡೆ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಕಳದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಾಗ ಜನತೆಯಿಂದ ಸಕಾರತ್ಮಕ ಸ್ಪಂದನೆ ಸಿಕ್ಕಿತು. ಅದರ ಪರಿಣಾಮವಾಗಿ ೨೦ ಸಾವಿರ ಮನೆಗಳಿಗೆ ಬಿಳಿ ಬೆಂಡೆಯ ಬೀಜವನ್ನು ವಿತರಿಸುವ ಕಾರ್ಯವು ಯಶಸ್ವಿ ನಡೆದಿತ್ತು. ಬಿಳಿ ಬೆಂಡೆಯ ಕೃಷಿ ಮಾಡಿ ಅದರಿಂದ ವಿವಿಧ ತರದಲ್ಲಿ ಖಾದ್ಯ ತಯಾರಿಸಿ ಬ್ರಾಂಡ್ಗೆ ಉತ್ತೇಜಿಸಿದ ಮಹಿಳಾ ಮೋರ್ಚಾದ ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ ಎಂದು ಸಚಿವ ವಿ.ಸುನೀಲ್ಕುಮಾರ್ ಕೃತಜ್ಞತೆ ಸಲ್ಲಿಸಿದರು.
ಬಿಳಿಬೆಂಡೆ ಕಾರ್ಲ ಕಜೆ ಕೇವಲ ಬಿಜೆಪಿಯ ಪ್ರಚಾರದ ದೃಷ್ಠಿಕೋನವಲ್ಲ. ರೈತರ ಸಲಹೆ ಸ್ವೀಕರಿಸಿ ದೂರಾದೃಷ್ಠಿಯನ್ನು ಇಟ್ಟುಕೊಂಡು ಬ್ರಾಂಡ್ನ್ನು ಸಿದ್ಧಪಡಿಸಲಾಗಿದೆ. ಬಿಳಿಬೆಂಡೆ ಬ್ರಾಂಡ್ ಮಾರುಕಟ್ಟೆ ಪ್ರವೇಶವಾಗಬೇಕು. ಬಿಳಿ ಬೆಂಡೆ ಮೇಳವು ವಿವಿಧ ಸಂಘ ಸಂಸ್ಥೆಗಳ ಮೂಲಕ ನಡೆದಾಗ ಮಾತ್ರ ಕೃಷಿ ಕಾಯಕಕ್ಕೆ ಹಾಗೂ ರೈತಾಪಿ ವರ್ಗಕ್ಕೆ ಅಸಕ್ತಿ, ಪ್ರೋತ್ಸಾಹ ದೊರಕಲು ಸಾಧ್ಯವಿದೆ ಎಂದರು.
ಜನಪ್ರತಿನಿಧಿಗಳು ಆಸ್ವಾದಿಸಲಿದ್ದಾರೆ:
ಕಳೆದ ಸಾಲಿನಲ್ಲಿ ಜರುಗಿದ್ದ ವಿಧಾನ ಸಭಾ ಅಧೀವೇಶನ ಸಂದರ್ಭದಲ್ಲಿ ಕಾರ್ಲ ಕಜೆ ಅಕ್ಕಿಯ ಅನ್ನವನ್ನು ಕರ್ನಾಟಕದ ವಿಧಾನ ಸಭಾ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಬಡಿಸುವ ಮೂಲಕ ಅದರ ರುಚಿಯನ್ನು ಅಸ್ವಾದಿಸಲು ಸಾಧ್ಯವಾಗಿತ್ತು. ಅವೆಲ್ಲರೂ ಖುಷಿ ಪಟ್ಟಿದ್ದರು. ಪ್ರಸಕ್ತ ವರ್ಷಾವಧಿಯಲ್ಲಿ ಬಿಳಿ ಬೆಂಡೆಯ ಖಾದ್ಯವನ್ನು ಬಡಿಸುವ ಮೂಲಕ ಕಾರ್ಕಳದ ಬ್ರಾಂಡ್ಗೆ ಇನ್ನಷ್ಟು ಪ್ರಚಲಿತ ದೊರಕಲಿ ಎಂದು ಸಚಿವ ವಿ.ಸುನೀಲ್ಕುಮಾರ್ ಆಶಿಸಿದರು.
ಬಿಜೆಪಿ ಮುಖಂಡ ಎಂ.ಕೆ.ವಿಜಯಕುಮಾರ್ ಮಾತನಾಡಿ, ಸಸ್ಯ ಸಂಪತ್ತು ಮಾನವ ಆರೋಗ್ಯ ವೃದ್ಧಿಗೆ ಮಹತ್ವದ ಪಾತ್ರವಹಿಸುತ್ತದೆ. ಬಿಳಿಬೆಂಡೆ ಬಳಕೆಯಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಸಾಧ್ಯವಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ,ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಮಹಿಳಾ ಮೋರ್ಚಾದ ತಾಲೂಕು ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮಲ್ಲಿಕಾ ರಾವ್ ನಿರೂಪಿಸಿದರು. ನಿಟ್ಟೆ ಶಕ್ತಿ ಕೇಂದ್ರದ ಅಧ್ಯಕ್ಷೆ ಮಾನಸ ಧನ್ಯವಾದವಿತ್ತರು. ವೇದಿಕೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ,ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಬಿಜೆಪಿ ಮುಖಂಡ ಎಂ.ಕೆ.ವಿಜಯಕುಮಾರ್ ಉಪಸ್ಥಿತರಿದ್ದರು.