ಉಡುಪಿ,ಸ .06 (DaijiworldNews/HR): ನಗರಾಡಳಿತ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿದ್ದು, ಇಡೀ ರಾಜ್ಯದಲ್ಲಿ ಬಿಜೆಪಿಯ ವಾತಾವರಣ ಉತ್ತಮ ಆಗುತ್ತಿದೆ. ಸಮಸ್ಯೆ ಬಗೆಹರಿಸುವ ಶಕ್ತಿ ಬಿಜೆಪಿಗೆ ಇದೆ ಎಂದು ಜನ ಮತ ಹಾಕಿದ್ದಾರೆ ಹಾಗಾಗಿ ನಾವು ಉತ್ತಮ ಆಡಳಿತ ಕೊಡಲು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಡಿದ ಅವರು, "ಎಲ್ಲಾ ಮತದಾರರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅತಂತ್ರ ಇರುವಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಯಾಕೆ ಸೈಲೆಂಟ್ ಆಗಿದ್ದರೆ ಗೊತ್ತಿಲ್ಲ. ಜೆಡಿಎಸ್ ಸ್ಪರ್ಧೆ ಮಾಡದಿರುವಲ್ಲಿ ನಮ್ಮ ಸ್ಥಾನಗಳು ಹೆಚ್ಚಾಗಿದೆ" ಎಂದರು.
ಇನ್ನು ಕಾಂಗ್ರೆಸ್ನ ಅಪಪ್ರಚಾರ ರಾಜ್ಯದ ಜನಕ್ಕೆ ಅರ್ಥ ಆಗಿದ್ದು, ಅವರ ಪ್ರಚಾರ ಮತ್ತು ಅಪಪ್ರಚಾರದಲ್ಲಿ ತಿರುಳಿಲ್ಲ. ಜನ ಮೋದಿಯ ಕಾರ್ಯಶೈಲಿಗೆ ಮತ ಹಾಕಿದ್ದಾರೆ. ಸಿಎಂ ಬೊಮ್ಮಾಯಿ ಮತ್ತು ಸಂಘಟನಾತ್ಮಕ ಚಟುವಟಿಕೆಯನ್ನು ಜನ ಗೆಲ್ಲಿಸಿದ್ದಾರೆ. ಜನಪರವಾಗಿರುವ ಬಿಜೆಪಿಯವರಿಗೆ ಮತದಾರ ಆಶೀರ್ವಾದ ಮಾಡಿದ್ದಾನೆ" ಎಂದಿದ್ದಾರೆ.
ಗಣೇಶೋತ್ಸವದ ಕುರಿತು ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ಕೊರೊನಾ ಗೈಡ್ ಲೈನ್ ಪಾಲಿಸುತ್ತಾ ಗಣೇಶೋತ್ಸವ ಆಚರಣೆಯಾಗಬೇಕು. ಜನ ರಾಜ್ಯಸರ್ಕಾರದ ನಿಯಮವನ್ನು ಒಪ್ಪಿದ್ದಾರೆ. ಸಣ್ಣಪುಟ್ಟ ಲೋಪದೋಷ ಇದ್ರೆ ಸರಿ ಮಾಡಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.