ಉಡುಪಿ, ಸೆ. 06 (DaijiworldNews/PY): ಕೇಂದ್ರ ಸರ್ಕಾರದ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದು, ಗುರುವಂದನೆ ಸಲ್ಲಿಸಿದ್ದಾರೆ.
ಈ ವೇಳೆ ಕರಾವಳಿಯ ಮೂರು ಜಿಲ್ಲೆಗಳಿಗೆ ಅನ್ವಯವಾಗಿಸಿ ಒಂದು ಸೋಲಾರ್ ಪಾರ್ಕ್ ರಚಿಸುವ ಬಗ್ಗೆ ಕೋರಿಕೆಯ ಪತ್ರವನ್ನು ಸ್ವಾಮೀಜಿಯವರು ಸಚಿವರಿಗೆ ನೀಡಿದ್ದಾರೆ.
ನವೀಕರಿಸಬಹುದಾದ ಇಂಧನಗಳ ಸಾಧ್ಯತೆಗಳ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.
"ಗೋವಿನ ಸೆಗಣಿಯಿಂದ ವಿದ್ಯುತ್ ತಯಾರಿಸುವ ಕುರಿತು ಮಾತನಾಡಿದ ಅವರು, ಈ ಉದ್ದೇಶಕ್ಕಾಗಿ ದೇಶದ ದೊಡ್ಡ ದೊಡ್ಡ ಗೋಶಾಲೆಗಳಲ್ಲಿ ಗೋಮಯದ ಹೇರಳ ಲಭ್ಯತೆಯನ್ನು ಬಳಸಿಕೊಳ್ಳುವ ಕುರಿತು ಸರ್ಕಾರ ವ್ಯವಸ್ಥೆ ಮಾಡಿದರೆ ಒಳ್ಳೆಯದು" ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಸಚಿವರು ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಿದರು.
"ಎಲ್ಲಾ ರೀತಿಯಿಂದಲೂ ಸೂರ್ಯಶಕ್ತಿ ಭವಿಷ್ಯಕ್ಕೆ ಅತ್ಯಂತ ಭರವಸೆಯ ಇಂಧನವಾಗಿದೆ. ರಾಜ್ಯದ ಕರಾವಳಿ ಭಾಗಗಳಾದ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದಾದರೂ ಒಂದು ಕಡೆ ಸೋಲಾರ್ ಪಾರ್ಕ್ ನಿರ್ಮಾಣ ಮಾಡಬೇಕು" ಎಂದು ಶ್ರೀಗಳು ಲಿಖಿತ ಪತ್ರವನ್ನು ಸಚಿವರಿಗೆ ನೀಡಿದ್ದಾರೆ.
ಈ ಬಗ್ಗೆ ಸಿಎಂ ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ ನಿರ್ಧಾರಿಸುವುದಾಗಿ ಸಚಿವರು ತಿಳಿಸಿದ್ದಾರೆ.