ಕಾರ್ಕಳ, ಸ.05 (DaijiworldNews/HR): ದೇಶದ ಸ್ವಾತಂತ್ರ್ಯ ತರುವಾಯ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಿದ್ದು, ದೇಶದ ಹಿತದೃಷ್ಠಿಯಿಂದ ಹಾಗೂ ಮುಂದಿನ ಪೀಳಿಗೆಗೆ ಅಗತ್ಯ ಇರುವ ಹೊಸ ಶಿಕ್ಷಣ ನೀತಿಯ ಕುರಿತು ಶಿಕ್ಷಕರು ಅಧ್ಯಯನ ನಡೆಸಬೇಕಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ಕುಮಾರ್ ಹೇಳಿದರು.
ಕರ್ನಾಟಕ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇದರ ವತಿಯಿಂದ ಎಸ್ ವಿಟಿ ಸಭಾಭವನದ ಅಂಡಾರು ವಿಠಲ ರುಕ್ಷಿಣಿ ಸಾಂಸ್ಕೃತಿಕ ಸಭಾಭವನದಲ್ಲಿ ಭಾನುವಾರದಂದು ಆಯೋಜಿಸಲಾಗಿದ್ದ ಕಾರ್ಕಳ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಶೈಕ್ಷಣಿಕ ರಂಗದ ಮೇಲೆ ಕೋವಿಡ್ ಕರಿಛಾತೆಯು ಕಳೆದ ಎರಡು ವರ್ಷಗಳಿಂದ ಬೀರಿದ ಪರಿಣಾಮವಾಗಿ ಅದರ ದುಷ್ಪರಿಣಾಮವು ವಿದ್ಯಾರ್ಥಿಗಳ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರಿದೆ. ಶೈಕ್ಷಣಿಕ ಚಟುವಟಿಕೆಗಳನ್ನು ಗಮನದಲ್ಲಿ ಇಟ್ಟು ಶಿಕ್ಷಕರು ಸರ್ವಸನ್ನದ್ಧತೆ ಮುಂದಾಗಬೇಕು" ಎಂದರು.
ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಶಿಕ್ಷಕರು ವಾರಿಯಸ್ಗಳಾಗಿ ಸೇವೆ ಸಲ್ಲಿಸಿರುವುದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಿಕ್ಷಕರ ಸೇವಾ ಕಾರ್ಯವು ಎಲ್ಲ ಸಂದರ್ಭದಲ್ಲಿ ದೊರಕುವಂತಾಗಲಿ ಎಂದು ಹಾರೈಸಿದರು.
ಎಸ್ ವಿ.ಟಿ ವಿದ್ಯಾ ಸಂಸ್ಥೆ ಸಂಚಾಲಕ ಕೆ.ಪಿ ಶೆಣೈ ಮಾತನಾಡಿ, "ಕೊರೊನಾ ದೇಹ ಮತ್ತು ಭವಿಷ್ಯ ಎರಡನ್ನು ಹಾಳುಗೆಡವಿದೆ ಶಿಕ್ಷಕರು ಕರೊನಾ ಸಂಕಷ್ಟ ಮತ್ತು ಸಂದಿಗ್ನ ಸ್ಥಿತಿಯಲ್ಲಿ ಎಲ್ಲ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಸಬೇಕಿದೆ. ಆನ್ಲೈನ್ ತರಗತಿಯು ಶೈಕ್ಷಣಿಕ ಪ್ರಗತಿಯನ್ನು ಕುಂಠಿತ ಗೊಳಿಸುತ್ತದೆ" ಎಂದರು.
ಕರ್ನಾಟಕ ರಾಜ್ಯ ಗೇರು ನಿಗಮದ ಅಧ್ಯಕ್ಚ ಮಣಿರಾಜ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ, ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗುರುದತ್, ಹೆಬ್ರಿ ತಹಶೀಲ್ದಾರ್ ಪುರಂದರ್, ಹೆಬ್ರಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕರು, ಕಳೆದ ಸಾಲಿನ ಹಾಗೂ ಪ್ರಸಕ್ತ ಸಾಲಿನ ಅತ್ತುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ವಿವಿಧ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.